ಬುಧವಾರ, ಸೆಪ್ಟೆಂಬರ್ 2, 2009

ರುಕ್ಮಿಣಿಯ ಅಜ್ಜಿ ಮನೆ - ೮

ಅಜ್ಜಿ ದನಗಳ ಕೊಟ್ಟಿಗೆಯಲ್ಲಿ ಕೂತಿದ್ದರು. ಎಲೆ ಅಡಿಕೆ ಮೆಲ್ಲುತ್ತಾ. ಅಜ್ಜೀ ಎಂದು ಊರಿಗೇ ಅರಚುವಂತೆ ಕೂಗಿಟ್ಟಳು. ’ಯೋಯ್, ಬಂದ್ಬಿಟ್ಯೇನು?’ ಎಂದರು. ಅಜ್ಜಿಗೆ ಸ್ವಲ್ಪ ಖುಷಿಯಾಗಿದ್ದ ಹಾಗೆ ಕಾಣಿಸಿತು. ’ಏನಜ್ಜಿ ಇಲ್ಲಿ ಕೂತ್ಕೊಂಡಿದ್ದೀರಾ’ಎಂದದಕ್ಕೆ ’ಇಲ್ಲೇ ತಣ್ಣಗಿದೆ’ ಎನ್ನುವ ಉತ್ತರ ಬಂತು. ಒಂದು ಕೆಂಚಗಿನ ಹಸು, ಒಂದು ಕಪ್ಪು ಬಿಳುಪಿನದು, ಪಕ್ಕದಲ್ಲಿ ಅದರ ಕರುವೋ ಏನೋ, ಪುಟಾಣಿದೊಂದು ಕರು ನಿಂತಿತ್ತು. ಎಮ್ಮೆಗಳೆಲ್ಲಾ ಎಲ್ಲೋದ್ವು ಅಜ್ಜಿ ಎಂದಳು? ಏನೋ ಕಳೆದುಕೊಂಡವಳಂತೆ. ’ಸರಿ, ಅವಕ್ಕೆ ವಯಸ್ಸಾಯ್ತು ಹೋಯ್ತು’ ಎಂದರು ಅಜ್ಜಿ. ಅದನ್ನು ಅಷ್ಟಕ್ಕೆ ಬಿಡದೆ, ಚಿಕ್ಕದೊಂದಿತ್ತಲ್ಲ ಇನ್ನೊಂದು ಇನ್ನೂ ಹಾಲು ಕೊಡುತ್ತಿತ್ತಲ್ಲ, ಹಣೆ ಮೇಲೆ ಬಿಳಿ ಮಚ್ಚೆ ಇತ್ತಲ್ಲ, ಎಂದು ಒಂದೊಂದರ ಪ್ರವರವನ್ನೂ ಬಿಡದೆ ಅಜ್ಜಿಯ ಬಾಯಿಂದ ಹೇಳಿಸಿದಳು.

’ಅಕ್ಕ ಯಾವಾಗ ಬಂದ್ರಿ’ ಎಂದು ಹಿಂದುಗಡೆಯಿಂದ ಧ್ವನಿಯೊಂದು ಬಂತು. ಹಸುವಿನ ಮೇವಿಗೆ ಜೋಳದ ಕಡ್ಡಿಗಳನ್ನು ತಂದಿದ್ದಳು ರುಕ್ಕೂ ಅತ್ತೆಯ ದೊಡ್ಡಮಗಳು ಗುಣಶೀಲ. ’ಈವಾಗ್ಲೇ ಬಂದಿದ್ದು, ಹುಲ್ಲು ತರಲ್ವೇನೆ ಹಸೂಗೆ?’ಎಂದಳು ರುಕ್ಕೂ. ಈಗ ಕಕ್ಕಾಬಿಕ್ಕಿಯಾಗುವ ಸರದಿ ಗುಣಾಗೆ ಬಂತು. ಎಲ್ಲಾ ಬಿಟ್ಟು ಹುಲ್ಲಿನ ಬಗ್ಗೆ ಕೇಳಿದಳಲ್ಲಾ ಎಂದು ಬೇಸರವೂ ಆಯಿತು. ’ಹುಲ್ಲು ಯಾತಕ್ಕೆ. ಇದರಲ್ಲೇ ಹಾಲು ಚೆನ್ನಾಗಿ ಬರುತ್ತೆ. ಅದನ್ನ ಒರಕೊಂಡು ಕೂತ್ಕೊಳ್ಳೋರು ಯಾರಕ್ಕ. ನಮ್ಮ ಮನೆ ಒರವಾರಿ ಅಟ್ಟದ ಮೇಲೆ ಹೋಗಿಬಿಟ್ಟಿದೆ’ ಎಂದಳು ಗುಣ. ಅವಳ ಮಾತಿನಲ್ಲಿ ಅರ್ಧಂಬರ್ಧ ಹೆಮ್ಮೆಯೂ ಸೇರಿದ್ದು ರುಕ್ಕೂಗೆ ಗೊತ್ತಾಯಿತಾದರೂ ಯಾತಕ್ಕೆಂದು ಅರ್ಥವಾಗಲಿಲ್ಲ. ಒಟ್ಟು ರುಕ್ಕೂ ಬೇರೆ ಮಾತೆತ್ತಿದಳು. ’ಈಗ ಕಾಲೇಜಿಗೆ ಹೋಗ್ತೀಯಲ್ವಾ ನೀನು?’ ಅವಳು ಇನ್ನೂ ಹೆಮ್ಮೆಯಿಂದ ’ಹೌದು, ಪೇಟೇಗೆ ಹೋಗ್ತೀನಿ’. ಇಲ್ಲಿ ಮೇನ್ ರೋಡಲ್ಲಿ ದೊಡ್ಡ ರೆಸಾರ್ಟ್ ಮಾಡಿದ್ದಾರೆ ನೋಡಿ, ಆ ದಾರಿಲೇ ನಾನು ದಿನಾಲು ಹೋಗೋದು’ ಎಂದಳು. ’ನೀನು ಅಲ್ಲೇ ಇಳ್ಕೊಂಡು ಬಂದಿರ್ತೀ ಅಲ್ವೇನಕ್ಕಾ?’ ಎಂಬ ಮರುಪ್ರಶ್ನೆ ಬಂತು.

’ಹ್ಞೂ, ಹ್ಞೂ, ತುಂಬಾ ದೊಡ್ಡದಾಗಿ ಕಟ್ಟಿದ್ದಾರೆ. ರೆಸಾರ್ಟಾ ಅದು? ಇದೇನು ಇಲ್ಲೆಲ್ಲಾ ಇಷ್ಟೊಂದು ಹುಲ್ಲು ಬೆಳೆದುಕೊಂಡಿದೆ?’ ಕೊಟ್ಟಿಗೆ ಪಕ್ಕದ ಹತ್ತಿಪ್ಪತು ಅಡಿ ಜಾಗದಲ್ಲಿ ಮೂರು ಮೂರು ಅಡಿ ಹುಲ್ಲು ಬೆಳೆದಿದ್ದು ನೋಡಿ ರುಕ್ಕೂ ಬೆರಗಾದಳು.

’ಹುಲ್ಲೇನು ಎಲ್ಲಾ ಕಡೆ ಬೆಳೆದುಕೊಳ್ಳತ್ತೆ, ಆ ರೆಸಾರ್ಟಲ್ಲಿ ಛತ್ರ, ಸ್ವಿಮಿಂಗ್ ಫೂಲ್ ಎಲ್ಲಾ ಇದೆ’
’ಅಷ್ಟು ದೊಡ್ಡ ಜಾಗ ಇದ್ಯೆಲ್ಲಾ, ಈ ಕರುನಾ ಈ ಕಡೆ ಬಿಟ್ಬಿಡ್ಲಾ, ಹುಲ್ಲನ್ನೆಲ್ಲಾ ತಿನ್ನತ್ತೆ’
’ಅಯ್ಯೋ ಬೇಡ, ನಾನು ಹಾಕಿರೋ ಗಿಡಾನೆಲ್ಲಾ, ಅದು ತಿಂಧಾಕತ್ತೆ. ಅಲ್ಲಿರೋ ಪಾರ್ಕು ಎಂಥಾ ಚೆನ್ನಾಗಿದೆ ಗೊತ್ತಾ?’
’ಏ ಕರು ಏನು ಹಾಳು ಮಾಡತ್ತೆ? ಹೋಗ್ಲಿ ಬಿಡು. ನಿಮ್ಮ ಕಾಲೇಜಲ್ಲಿ ಪಾಠ ಎಲ್ಲಾ ಚೆನ್ನಾಗಿದೆಯಾ?’
’ಹ್ಞೂ, ನಮಗೇನು ಗೈಡು ಇದೆಯಲ್ಲಾ, ಪಾಸಾದ್ರೆ ಸಾಕು ’.
’ಏ ಗೈಡ್ ಎಲ್ಲಾ ಒದ್ಬೇಡ. ಟೆಕ್ಸ್ಟ್ ತಗೊಂಡು ಓದೋದೆ ಒಳ್ಳೇದು. ತೋಟದಲ್ಲಿ ಏನಾಕಿದ್ದೀರಾ?
’ಸದ್ಯಕ್ಕೆ ಏನು ಇಲ್ಲ, ಈ ಸಾರಿ ಭತ್ತ, ರಾಗಿ ಹಾಕಿ ಹೊಲ ಮಾಡ್ತೀವಿ. ಅಕ್ಕ ಸಾಯಂಕಾಲಕ್ಕೆ ರೆಸಾರ್ಟ್ಗೆ ಹೋಗಿ ಬರಣ್ವಾ’

ಅವರ ಮಾತು ಎಲ್ಲಿಗೂ ನಿಲ್ಲದೇ ಗಿರಕಿ ಹೊಡೆಯುತ್ತಿದ್ದದ್ದು ಈಗಾಗಲೇ ರುಕ್ಕೂಗೆ ತಿಳಿದುಹೋಗಿತ್ತು. ’ಸಾಯಂಕಾಲನಾ?’ ಎಂದಷ್ಟೇ ಹೇಳೀ ಮುಂದಕ್ಕೆ ಏನು ಮಾತನಾಡಲೆಂದು ಯೋಚಿಸುತ್ತಿದ್ದಳು. ಗುಣಾ ಈ ಕರೂಗೆ ಏನು ಹೆಸರಿಟ್ಟಿದ್ದೀರೆ? ಎಂದಳು ಆಸೆಯಿಂದ. ’ಹೋ, ಅದೆಲ್ಲಾ ಪಟ್ಟಣದಲ್ಲಿ ಆರಾಮಾಗಿ ಇರೋರ್ಗೆ ನಮಗಲ್ಲಾ’ ಎಂದಳು ಗುಣಾ. ’ಗೌರಿ ಅಂತಾ ಹೆಸರಿಡಿ’ ಎಂದಳು. ’ಏನಮಾ, ಊರು ನೆನಪಾಯ್ತ?’ ಎಂದು ಮಾವನ ಕೀರಲು ಧ್ವನಿ ಕೇಳಿಸಿತು. ’ಹೋ, ಏನೋ ಬರಣ ಅಂತ ಬಂದ್ರೆ, ನೀವು ಒಂದ್ಸಾರಿನಾದ್ರೂ ನಮ್ಮೂರಿಗೆ ಬಂದಿದ್ದೀರಾ?’ ಎಂದು ದಬಾಯಿಸಿದಳು. ’ಹ್ಞೂ, ಆಯ್ತು. ಈವಾಗ ಸಾಯಂಕಾಲಕ್ಕೆ ಏನು ಪ್ರೋಗ್ರಾಮ್ ಹಾಕಣ ನಿಮಗೇ....’, ಹಳೇ ಮಾವನಿಗೆ ಇನ್ನೂ ಯಾವುದಕ್ಕೂ ಸೀರಿಯಸ್ನೆಸ್ ಬಂದಿಲ್ಲಾ ಅಂದುಕೊಂಡು, ’ಸಾಯಂಕಾಲಕ್ಕೆ’ ಎಂದು ಶುರುಮಾಡಿದಳು. ’ಅದನ್ನೇ ನಾನು ಹೇಳ್ತಿದ್ದೆ ಅಪ್ಪಾ, ಸಾಯಂಕಾಲಕ್ಕೆ ಅಕ್ಕನ್ನ ಕರಕೊಂಡು ರೆಸಾರ್ಟ್ ನೋಡಿಸಿಕೊಂಡು ಬರ್ತೀವು. ನಾನು ಲಕ್ಷ್ಮೀ ಹೋಗಿ’, ಎಂದು ಮಧ್ಯೆ ಬಾಯಿ ಹಾಕಿದಳು. ’ಹ್ಞೂ, ಬೆಂಗಳೂರಿಂದ ಬರೋರ್ಗೆ ಅದೇ ಸರಿ. ಸಾಯಂಕಾಲಕ್ಕೆ ಇವನ್ನೂ ಕರಕೊಂಡು, ಈ ಕಡೆಯಿಂದ ಹೋಗಿ...’ ಎಂದು ಮಾವ ರಾಗ ತೆಗೆದರು. ’ಮಾವ, ನಂಗದೆಲ್ಲಾ ಗೊತ್ತಿಲ್ಲ. ಬೆಂಗಳೂರಲ್ಲಿ ನಾನು ರೆಸಾರ್ಟ್ ನೋಡೇ ಇರ್ತೀನಿ. ಅದಕ್ಕೆ, ನೀವು ನನಗೆ ಹೊಲ, ಗದ್ದೆ, ತೋಪು ಇಂಥಾದ್ದನ್ನೆಲ್ಲಾ ತೋರಿಸ್ಬೇಕು, ತಾನೆ’ ಎಂದಳು. ಉಕ್ಕಿ ಬರುತ್ತಿದ್ದ ಕೋಪವನ್ನು ಅದುಮಿಕೊಳ್ಳುತ್ತಾ. ಮಾವ ಮತ್ತೆ ರಾಗವಾಗಿ ’ಹ್ಞೂ, ನೀನೆಂಗೇಳದ್ರೇ ಅಂಗೆ’ ಎಂದು, ತೆಪ್ಪಗೆ ಎದ್ದು ಹೊರಟರು. ಗುಣಾ, ’ಅಕ್ಕಾ, ಒಳಗ್ಬನ್ನಿ ಮನೆ ತೋರಿಸ್ತೀನಿ’ ಎಂದಳು. ಮನೆಯೆಲ್ಲಾ ಸುತ್ತುಹಾಕಿದಮೇಲೆ, ’ಏನೇ ಹೇಳು ಗುಣಾ, ಆ ಮನೇನೆ ಎನೋ ಒಂಥರಾ ಇಷ್ಟ ನಂಗೆ’ ಅಂದದಕ್ಕೆ ’ಆ ಮನೇನಾ, ಸದ್ಯ ಯಾವಾಗ ಬಿಡ್ತೀವೋ ಅನ್ಸಿತ್ತು. ಆ ಮನೇಗೆ ಸಗಣಿ ಬಳ್ದೂ ಬಳ್ದೂ ನಮ್ಮ ಕೈಯೇ ಸೇದು ಹೋಗ್ತಿತ್ತು’ ಎಂದಳು ಗುಣಾ. ’ಸಗಣಿ ಬಳೀತಿದ್ದಿದ್ದು ನಮ್ಮಜ್ಜಿ’ ಎಂದು ಬಾಯಿಗೆ ಬಂದರೂ, ಎತ್ತಗೋ ತಿರುಗುವಂತೆ ನಟಿಸಿದಳು.

ಅತ್ತಿತ್ತ ತಿರುಗಿ, ಮತ್ತೆ ದನದ ಕೊಟ್ಟಿಗೇ ಕಡೇನೆ ರುಕ್ಕೂ ಹೊರಟಳು. ’ಇಲ್ಲೇ ಕೂತ್ಕೋ’ ಎಂದು ಕರೆದ ಗುಣಾಗೆ ’ಅಜ್ಜೀ ಜೊತೆ ಸ್ವಲ್ಪ ಹೊತ್ತು ಕೂತ್ಕೋತೀನಿ’ ಎಂದಳು. ’ಆಯ್ತು’ ಎಂದು ಹಿಂದಕ್ಕೆ ತಿರುಗಿದ ಮೇಲೆ, ’ಯಾರು ಮನೇಗೆ ಬಂದರೂ, ದನದ ಕೊಟ್ಟಿಗೇಲಿ ಕೂತ್ಕೊಳ್ಳೊ ಹಾಗೆ ಮಾಡುತ್ತೆ ಇದು’ ಎಂದು ಒದರಿದ್ದು ರುಕ್ಕೂಗೂ ಕೇಳಿಸಿತು. ಅಡುಗೆ ಮನೆಯಲ್ಲಿ ಅತ್ತೆ ’ನಮ್ಮನ್ನ ನೋಡೋಕೆ ಯಾರು ಬರ್ತಾರೆ?’ ಎಂದು ಗೊಣಗಿದ್ದೂ ಕೇಳಿಸಿತು.

7 ಕಾಮೆಂಟ್‌ಗಳು:

  1. ಈ ಭಾಗ ಬಹಳ ಚೆನ್ನಾಗಿದೆ. ಭಾವಗಳು ದಟ್ಟವಾಗಿ ಮೂಡಿವೆ.ಆದಷ್ಟು ಬೇಗ ಮುಂದಿನ ಭಾಗ ಬಂದರೆ ಚೆನ್ನಾಗಿರುತ್ತದೆ.
    ಅಂದಹಾಗೆ ‘ಒರವಾರಿ’ ಎಂದರೇನು?

    ಪ್ರತ್ಯುತ್ತರಅಳಿಸಿ
  2. e bhaaga thumba ishta aaythu... halli bhaashe hege kalithiri maththu janajeevana hege nimage goththayithu antha innu kuthoohala aagtha ide :)

    thumba nidhaana maadtheeri post maadalu [ide complaint nanmelu ide.. aadru nimmashtu nidhaana allappa naanu :)

    ಪ್ರತ್ಯುತ್ತರಅಳಿಸಿ
  3. Nee baruva haadiyali ya aarane baaga haakideeni.... thumba dina aaythu... E baari yaarigu update hogilla... yaake antha gotthillla... adike naane heltha ideeni :)

    ಪ್ರತ್ಯುತ್ತರಅಳಿಸಿ
  4. @ ಚಂದ್ರಕಾಂತ,

    ಮುಂದಿನ ಭಾಗ ಹಾಕಿದ್ದೇನೆ :) ಆದರೆ, ಇದರಲ್ಲಿ ನೀವು ಕಾತರರಾಗಿ ಕಾಯುತ್ತಿರುವಂತಹ ಮುಂದುವರಿಕೆ ಬಂದಿಲ್ಲವೆನಿಸುತ್ತದೆ.
    ಈಗ, ಇದಕ್ಕೆ ಮುಂದಿನ ಪೋಸ್ಟನ್ನು ಬೇಗ ಹಾಕುವುದೇ ನನಗಿರುವ ಒಂದೇ ದಾರಿ!

    @ ಸುಧೇಶ್,

    ಓಕೆ ಓಕೆ, ಇಷ್ಟರಲ್ಲೇ ಬಂದು ಓದ್ತೀನಿ. ನಿಮ್ಮ ಪರಿಹಾಸ್ಯಕ್ಕುತ್ತರ ಮೇಲಿರ್ಕುಂ! :)

    ಪ್ರತ್ಯುತ್ತರಅಳಿಸಿ
  5. @ ಚಂದ್ರಕಾಂತ,

    ಹೇಳಲು ಮರೆತುಬಿಟ್ಟೆ! ಒರವಾರಿ ಎಂದರೆ ಹುಲ್ಲನ್ನು ಮಣ್ಣಿನಿಂದ ಕೆತ್ತಿ ತೆಗೆಯಲು ಬಳಸುವ ’ಆಯುಧ’! ಬೇರೆ ಬೆಳೆಗಳಂತೆ ಇದನ್ನು ಕತ್ತರಿಸಲು ಸಾಧ್ಯವಿಲ್ಲ ನೋಡಿ, ಅದಕ್ಕೆ ಈ ತಂತ್ರ.

    ಪ್ರತ್ಯುತ್ತರಅಳಿಸಿ
  6. ಹಾಯ್ ಮುತ್ತಕ್ಕ....ಚೆನ್ನಾಗಿದೆ ಈ ಭಾಗ, ಮುಂದಿನ ಸಲ ರುಕ್ಮಿಣಿ ಜೊತೆ ನಾನು ಊರಿಗೆ ಹೋಗಣಾ ಅನಿಸ್ತಿದೆ :)

    (ಸುಮಾರು ದಿನ ಆದಮೇಲೆ ಬಂದ್ರೂ ತುಂಬ ಮುಂದಕ್ಕೇನು ಹೋಗಿಲ್ಲ ನೀನು....ಹಹಹ)

    ಪ್ರತ್ಯುತ್ತರಅಳಿಸಿ