ಶುಕ್ರವಾರ, ಸೆಪ್ಟೆಂಬರ್ 18, 2009

ರುಕ್ಮಿಣಿಯ ಅಜ್ಜಿ ಮನೆ - ೧೦

ರುಕ್ಕೂ ಒಳಗೆ ಹೋಗುತ್ತಿದ್ದಂತೆಯೇ ಯಾರೋ ಅವಸರವಾಗಿ ರೂಮಿನೊಳಕ್ಕೆ ಹೋದ ಹಾಗಾಯಿತು. ನನಗೇಕೆ ಎಂದುಕೊಂಡು ಸುಮ್ಮನಾದಳು. ಅತ್ತೆ! ಅತ್ತೆ! ಎಂದು ಒಂದೆರಡು ಸಲ ಕೂಗಿಟ್ಟಳು, ಆ ಕಡೆಯಿಂದ ಉತ್ತರ ಬರಲಿಲ್ಲ. ಒಂದು ಕ್ಷಣ ಕೊಟ್ಟಿಗೆಗೆ ವಾಪಾಸು ಹೋಗಿಬಿಡುವ ಎನಿಸಿತು. ಮತ್ತೆ ಯಾಕೆ ರಂಪ-ರಾಮಾಯಣ ಎಂದು ಅಡಿಗೆ ಮನೆಗೇ ಹೊರಟಳು.

’ಏನತ್ತೆ ಮಾಡ್ತಾ ಇದ್ದೀರ?’ ಎಂದು ರಾಗವಾಗಿ ಕೇಳುತ್ತಾ ತಾನು ಕೂರುವುದಕ್ಕೆ ಒಂದು ಜಾಗವನ್ನು ಹುಡುಕತೊಡಗಿದಳು. ಅತ್ತೆ ಒಲೆಯ ಕಡೆಗೆ ತಿರುಗಿಕೊಂಡೇ ’ಆಯ್ತಾ, ಅಜ್ಜಿ ಜೊತೆ ಹರಟಿದ್ದು?’ ಎಂದರು. ’ಹ್ಞೂ ಮತ್ತೆ, ದೊಡ್ಡವರಿಂದ ಶುರುಮಾಡ್ಕೊಂಡು ಒಬ್ಬೊಬ್ಬರನ್ನಾಗಿ ವಿಚಾರಿಸಿಕೊಳ್ತಾ ಇದ್ದೀನಿ’ ಎಂದಳು ಬರುತ್ತಿದ್ದ ಸಿಟ್ಟನ್ನು ತಡೆದುಕೊಳ್ಳುತ್ತ. ’ಆಹಾಹಾ ಬಲೆ ಮಾತು ನೀವು ಬೆಂಗಳೂರಿನವರು’ ಎಂದು ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದರು ಅತ್ತೆ.
’ಹೌದು ಮತ್ತೆ, ನಾನು ನಿತ್ಯ ಆಫೀಸಿನಲ್ಲಿ ಹೀಗೆ ಮಾತಾಡೋದಕ್ಕೆ, ನನಗೆ ಸಂಬಳ ಕೊಡೋದು’
’ನಿಮ್ಮದು ಏನಾದ್ರೂ ಆರಾಮ್ ಕೆಲಸ ಬಿಡು’
’ಆ ಮನೇಲಿ ಅಡಿಗೆ ಮನೆ ಎಷ್ಟು ದೊಡ್ಡದಾಗಿತ್ತತ್ತೆ, ಅಲ್ಲೇ ಕೂತ್ಕೊಂಡು ಊಟ ಮಾಡ್ತಾ ಇರ್ಲಿಲ್ವಾ?’
’ನೀನೆ ಹಿಂಗಂತೀಯಲ್ಲಾ? ಹಾಳು, ಈಗೆಲ್ಲಾ ಅಡಿಗೆ ಮನೇಲಿ ಯಾರು ಊಟ ಮಾಡ್ತಾರೆ’

’ಈ ಮನೆಯಲ್ಲಿ ಒಬ್ಬೊಬ್ಬರದು ಒಂದೊಂದು ವರಸೆ ಆಗಿದೆಯಲ್ಲಾ’ ಎಂದುಕೊಂಡು, ತರಕಾರಿಗಳನ್ನೆಲ್ಲಾ ಒತ್ತಟ್ಟಿಗೆ ಸರಿಸಿ ತಾನು ಕೂರಲು ಜಾಗ ಮಾಡಿಕೊಂಡಳು. ಅತ್ತೆ ಇವಳು ಕೂತದ್ದನ್ನು ಓರೆ ನೋಟದಲ್ಲಿ ನೋಡಿ ಅತ್ತಕಡೆಗೆ ತಿರುಗಿಬಿಟ್ಟಳು. ಅದು ಇವಳ ಗಮನಕ್ಕೂ ಬಂತು.
ಸುಮ್ಮನಿರಬರದೆಂದು ಮಾತಿಗೆ ಹಚ್ಚಿದಳು.
’ಏನು ಕೆಲಸ ಅತ್ತೆ ಈವಾಗ? ತರಕಾರಿ ಏನಾರು ಎಚ್ಲಾ ಹೇಳಿ.’
’ಅದ್ಯಾಕೆ, ನೀನು ನಮ್ಮ ಮನೆಯ ನೆಂಟಳು. ನೆಂಟರನ್ನ ಹಾಗಲ್ಲ ನಾವು ನೋಡಿಕೊಳ್ಳೋದು.’
’ಏನು ಅಡಿಗೆ ಇವತ್ತು, ಹುಳ್ಸೊಪ್ಪು ಇದೆಯಾ ಅಥವಾ ಕಾಳು ಹುಳೀನಾ?’
’ಅವೆಲ್ಲಾ ಯಾತಕ್ಕೆ, ಇವತ್ತು ಪಲಾವು ಮಾಡ್ತಾ ಇದ್ದೀನಿ. ನಮ್ಮೆನೇಗೆ ಬಂದಿದ್ದೀಯ ನೀನು, ನಿನಗೆ ಯಾವ ಸ್ವೀಟು ಬೇಕು ಹೇಳು. ಅದನ್ನೆ ಮಾಡ್ತೀನಿ.’

ರುಕ್ಕೂಗೆ ಈಗ ಅಳು ಬರುವುದೊಂದೆ ಬಾಕಿಯಾಗಿತ್ತು. ಇದಕ್ಕಿಂತ ಹಳೆಯ ಸಿಡುಗುಟ್ಟುವ ಅತ್ತೆಯೇ ವಾಸಿಯಾಗಿತ್ತಲ್ಲ ಎನ್ನಿಸಿತು. ನಮ್ಮಜ್ಜಿ ಮನೆಗೆ ನಾನು ಬಂದರೆ, ಇವರ ನೆಂಟರ್ಯಾಕಾಗ್ತೀನಿ ಎಂದು ತಲೆಚಚ್ಚಿಕೊಳ್ಳುವಂತಾಯಿತು. ಇಲ್ಲದ ಉತ್ಸಾಹ ಬರಿಸಿಕೊಂಡು ಮತ್ತೆ ಮಾತಿಗೆ ತೆಗೆದಳು.

’ಪಲಾವಾ, ಮಾವನಿಗೆ ನಿತ್ಯ ಮುದ್ದೆ ತಿಂದು ಅಭ್ಯಾಸ ಅಲ್ವಾ ಅತ್ತೆ?’
’ಎರಡೊತ್ತು ಮುದ್ದೆ ಯಾರು ತಿಂತಾರೆ? ಬೇಜಾರು’

ರುಕ್ಕೂ ಮನಸ್ಸಿನಲ್ಲೇ ಹುಬ್ಬೇರಿಸಿದಳು. ಗುಣಾಳ ತಂಗಿ ಲಲಿತ ರೂಮಿನಿಂದ ಅಡಿಗೆ ಮನೆಗೆ ಬಂದಳು, ’ಏನು ಅಕ್ಕಾ, ಇಲ್ಲಿ ಕೂತಿದ್ದೀಯಾ?’ಎಂದುಕೊಂಡು. ಹಾಹೂ ಎಂದಾದ ಮೇಲೆ, ಲಲಿತ ಅವಳಮ್ಮನನ್ನು ಕುರಿತು ’ರುಬ್ಬಿಕೊಂಡು ಆಯ್ತೇನಮ್ಮ ಕರೆಂಟು ಹೊರ್ಟೋಗತ್ತೆ’ ಎಂದಳು. ಏನೋ ದೊಡ್ಡ ತಪ್ಪು ನಡೆದ ಹಾಗೆ ಅತ್ತೆ, ’ಅಯ್ಯೋ ಇಲ್ಲವೇ, ಒಂದು ನಿಮಿಷ ಕೈ ಆಡಿಸಿ ಬಿಡ್ತೀನಿ ಇರು, ರುಬ್ಬಿಟ್ಟುಬಿಡು. ಮಿಕ್ಸಿ ಕೆಳಗಿಟ್ಟುಕೋ’ ಎಂದಳು.

ಲಲಿತ ಮಿಕ್ಸಿ ಸರಿಮಾಡಲು ಅಡಿಗೆಮನೆಯಲ್ಲಿ ಅಂತಿಂದಿತ್ತ ಓಡಾಡತೊಡಗಿದಳು. ಅವಳು ಸಾಮಾನು ತೆಗೆಯಲು ರುಕ್ಕೂ ಒಂದು ಸಾರಿ ಹಿಂದಕ್ಕೆ, ಇನ್ನೊಂದು ಸಾರಿ ಮುಂದಕ್ಕೆ ವಾಲಬೇಕಾಯಿತು. ಕಡೆಗೆ ಲಲಿತ ’ಅಕ್ಕ ಮುಚ್ಚಳ ನಿನ್ನ ಹಿಂದೆ ಇದೆ’ ಎನ್ನಲು, ’ನಾನು ಹಾಲಲ್ಲಿ ಕೂತ್ಕೋತೀನಿ ತಡಿ’ ಎಂದು ಎದ್ದಳು. ಇವರ ತರಾತುರಿಗೆ ತಡೆಯದೇ ಕರೆಂಟು ಹೊರಟೇ ಹೋಗಿತ್ತು.

ಅಡಿಗೆ ಮನೆಯಲ್ಲಿ ಚಡಪಡಿಕೆ ಎಷ್ಟು ಹೊತ್ತಿಗೂ ನಿಲ್ಲದ್ದಕ್ಕೆ ರುಕ್ಕೂ ತಿರುಗೀ ಎದ್ದು ಬಂದು ಬಗ್ಗಿ ನೋಡಿದಳು. ’ಕರೆಂಟು ಹೊರಟೇ ಹೋಯಿತು, ಇನ್ನು ಆರು ಗಂಟೇಕಾಲ ಬರಲ್ಲ’ ಎಂದಳು ಲಲಿತ. ’ಆರುಗಂಟೇಗೆ ಬರುತ್ತಾ, ಆಗೆಲ್ಲಾ ಹನ್ನೆರಡು ಗಂಟೆ, ಹನ್ನೆರಡು ಗಂಟೆಗಲ್ವಾ ಕೊಡ್ತಾ ಇದ್ದದ್ದು’ ಎಂದ ರುಕ್ಕೂಗೆ ಒಂದು ರೀತಿ ಸಂತೋಷವೇ ಆಗಿತ್ತು. ’ರಾತ್ರಿ ಮಾಡೋಣ ಬಿಡು’ ಎಂದು ಅವರಿಬ್ಬರು ಪ್ಲಾನು ಹಾಕುತ್ತಿರುವಾಗ, ’ರುಬ್ಬುಗುಂಡು ಇದೆಯಲ್ಲಾ, ಒಂದು ಸುತ್ತು ತಿರುಗಿಸಿಬಿಡಿ’ ಎಂದಳು ಉತ್ಸಾಹದಿಂದ. ’ಓ, ಈಯಕ್ಕಾ ಇದನ್ನೂ ಮಾಡಿದೆ ಅಂತ ಕಾಣತ್ತೆ’ ಎಂದಳು ಲಲಿತ ಬೇಸರಗೊಂಡು.

’ಹೋ ಅದೇನು ದೊಡ್ಡ ವಿಷಯ, ಅಜ್ಜೀನ ಕೇಳ್ನೋಡು, ಒಬ್ಬಟ್ಟಿಗೆ ಬೇಳೆ ರುಬ್ಬುತ್ತಿದ್ದೆ’ ಎಂದಳು ರುಕ್ಕೂ. ’ಹಾಗಾದ್ರೆ, ಇವತ್ತು ರುಬ್ಬೇ ರುಬ್ತಿ ಅನ್ನು’ ಎಂದು ಲಲಿತ ಅನ್ನುವ ಹೊತ್ತಿಗೆ ರುಕ್ಕೂ ಪಾತ್ರೆಯನ್ನು ಅವಳ ಕೈಯಿಂದ ತೆಗೆದುಕೊಂಡಾಗಿತ್ತು.

13 ಕಾಮೆಂಟ್‌ಗಳು:

  1. halli janara manasu mugdha annuththaare... aadre kelavomme thumba sankuchitha kooda aagiruththe... adannu e bhaagadalli nodabahudu...... obbobbaru yenu thamma manasinali andukolluthidaare annuvudanna chennagi heltha ideera... E bhaaga ishta aaythu... munde kathe yaava thiruvu padeyuvudo endu kuthuhaliyaagi kaaytha ideeni.

    ಪ್ರತ್ಯುತ್ತರಅಳಿಸಿ
  2. ಹಳ್ಳಿಯಲ್ಲಿಯೇ ಇರುವವರ ಕಣ್ಣು ಯಾವಾಗಲೂ ಪಟ್ಟಣದವರ ಮೇಲಿರುತ್ತದೆ. ಅವರಿಗಿಂತ ನಾವೇನು ಕಡಿಮೆ ಎಂಬ ಭಾವ ಅವರನ್ನು ಕಾಡುತ್ತಿರುತ್ತದೆ. ಅದಕ್ಕಾಗಿಯೇ ಈ ಹಳ್ಳಿಯ ಲಲಿತ ಅವರಮ್ಮನ ನಡವಳಿಕೆ ಹಾಗಿದೆ. ಅದಕ್ಕೆ ವಿರುದ್ಧವಾಗಿ ಹಳ್ಳಿ ಬಿಟ್ಟು ಬಂದವರಿಗೆ ತಮ್ಮ ಬೇರುಗಳ ನೆನಪು ಹೆಚ್ಚಾಗಿ ಕಾಡುತ್ತಿರುತ್ತದೆ- ಇಲ್ಲಿಯ ರುಕ್ಮಿಣಿಯಂತೆ.

    ಈಗ ವಿದೇಶದಲ್ಲಿರುವ ಭಾರತೀಯರ ಮಕ್ಕಳು ಎಷ್ಟು ಚೆನ್ನಾಗಿ ಭಗ್ವದ್ಗೀತೆ ಹೇಳಲು ಕಲಿತಿರುತ್ತಾರೆ ಗೊತ್ತೇ ( ಅವರಮ್ಮಂದಿರ ಒತ್ತಾಯವೂ ಇರುತ್ತದೆ) ಅದೇ ಇಲ್ಲಿನ ಬಹು ಮಕ್ಕಳಿಗೆ ಭಗವದ್ಗೀತೆಗಿಂತ ರಾಕ್ ಸಂಗೀತವೇ ಇಷ್ಟವಾಗುತ್ತದೆ.

    ಪ್ರತ್ಯುತ್ತರಅಳಿಸಿ
  3. ಮುತ್ತುಮಣಿ ನೀವು ಬರೆದ ಧಾರವಾಹಿ ತುಂಬಾ ಇಷ್ಟವಾಯ್ತು.
    ನೀವು ಹಳ್ಳಿಯಲ್ಲಿ ಬೆಳೆದಿದ್ದೋ, ಅಥವಾ ರುಕ್ಮಿಣಿಯಂತೆ ಆಸೆಯಿಂದ ಅಜ್ಜಿ ಮನೆಗೆ ಹೋಗ್ತಾ ಇದ್ದಿರೋ?
    ಹಳ್ಳಿ ಬಗ್ಗೆ ತುಂಬಾ ನೈಜವಾಗಿ ಬರೆದಿದ್ದೀರಿ.ಮುಂದಿನ ಭಾಗ ಬೇಗ ಪೋಸ್ಟ್ ಮಾಡಿ:-).

    ಪ್ರತ್ಯುತ್ತರಅಳಿಸಿ
  4. ಚೆನ್ನಾಗಿತ್ತು...
    ಹಳೆಯದನ್ನೆಲ್ಲಾ ಇನ್ನು ಓದಿಲ್ಲ...ಈಗ ಓದುತ್ತೇನೆ....
    ನಿರೂಪಣ ಶೈಲಿ ಚೆನ್ನಾಗಿದೆ..

    ಪ್ರತ್ಯುತ್ತರಅಳಿಸಿ
  5. @

    Sorry I am unable to respond to any of you due to a few technical problems with my system. Thank you all very much for reading and Rukmini will come back soon :)

    ಪ್ರತ್ಯುತ್ತರಅಳಿಸಿ
  6. ಈ ಭಾಗಾನೂ ತುಂಬಾ ಚೆನ್ನಾಗಿದೆ... ಕೆಲವು ಸಾಲುಗಳು ತುಂಬ ಹೊಸದಾಗಿವೆ...eg: "ಮನಸ್ಸಿನಲ್ಲೆ ಹುಬ್ಬು ಹಾರಿಸಿದಳು" !!!

    ಪ್ರತ್ಯುತ್ತರಅಳಿಸಿ
  7. ಎಲ್ಲಿ ಹೋಗಿದ್ದೀರಿ... ಪತ್ತೆ ಇಲ್ಲ... ರುಕ್ಮಿಣಿಯ ಕಥೆ ಏನಾಯಿತು?

    ಪ್ರತ್ಯುತ್ತರಅಳಿಸಿ
  8. ಬೇಗ ಬರ್ಲಿ... ಎರಡೂ ತಿ೦ಗಳೂ ತು೦ಬಾ ದೊಡ್ಡ ಗ್ಯಾಪ್ ಆಯಿತು.... ಸ್ವಲ್ಪ ನನ್ನನ್ನು ನೋಡಿ ಕಲಿಯಿರಿ.. ನಾನು ನೋಡಿ... ಒ೦ದು ತಿ೦ಗಳೂ ಗ್ಯಾಪ್ ಮಾತ್ರ ಕೊಟ್ಟಿದ್ದೆ ;) ಹ ಹ ಹ....

    ಪ್ರತ್ಯುತ್ತರಅಳಿಸಿ
  9. the story is very nice medam and your doing very great job ...innu olle kathe kaadhambari upload maadii...

    ಪ್ರತ್ಯುತ್ತರಅಳಿಸಿ