ಶುಕ್ರವಾರ, ಸೆಪ್ಟೆಂಬರ್ 11, 2009

ರುಕ್ಮಿಣಿಯ ಅಜ್ಜಿ ಮನೆ - ೯

ರುಕ್ಕೂ ಸೀದಾ ಹೋಗಿ ಅಜ್ಜಿಯ ಜೊತೆ ಕೊಟ್ಟಿಗೆಯಲ್ಲೇ ಕೂತಳು. ’ಏನಜ್ಜಿ ಇದು ಅಧ್ವಾನ?’ ಎಂದಳು ಮೆತ್ತಗೆ. ಅಜ್ಜಿ ನೆಟ್ಟನೋಟದಲ್ಲೇ ಕೂತಿದ್ದು ನೋಡಿ ವಯಸ್ಸಾಯಿತಲ್ಲಾ, ಇನ್ನು ಕಿವಿಗೇನು ಗ್ಯಾರಂಟಿ ಎಂದುಕೊಂಡು ಸುಮ್ಮನಾದಳು.

ಇವಳು ಬಂದದ್ದನ್ನು ಗಮನಿಸಿದ ಅಜ್ಜಿ ’ಏನು ನಿನಗೂ ದೊಡ್ಡ ಕಂಪನಿಲೇ ಕೆಲ್ಸಾನಾ?’ ಎಂದು ಮಾತಿಗೆ ಹಚ್ಚಿದರು.
ರುಕ್ಕೂ ’ಹ್ಞೂ. ಅಲ್ಲಿ ನಂಗೇನು ಕೆಲ್ಸ ಗೊತ್ತಾ ಅಜ್ಜಿ, ಎಲ್ಲಾರ್ಗೂ ಫೋನು ಮಾಡಿ ನಮ್ಮ ಕಂಪನೀಗೆ ಕೆಲ್ಸಕ್ಕೆ ಸೇರ್ಕೊಳಿ, ನಮ್ಮ ಕಂಪನಿಗೆ ಕೆಲ್ಸಕ್ಕೆ ಸೇರ್ಕೊಳಿ ಅನ್ನೋದು’ ಎಂದು ನಕ್ಕಳು.
’ಹ್ಞೂ, ಏನಾರು ಒಂದು ಮಾಡ್ಲೇಬೇಕಲ್ಲಮ್ಮ. ನಿನಗೂ ಹೋಗ್ತಾನೆ ಹತ್ತಾ?’
ಈ ಅಜ್ಜಿಗೆ ಗೊತ್ತಿಲ್ಲದೇ ಇರೋ ವಿಷಯಾನೇ ಇಲ್ಲ ಎಂದುಕೊಂಡು ಮಾತು ಮುಂದುವರೆಸಿದಳು.
’ಹ್ಞೂ, ಕೊಡ್ತಾರಜ್ಜಿ. ಬೇರೆ ದೇಶದೋರು ನಮಗೆ ಸಂಬಳ ಕೊಡೋದು. ಅವರಿಗೆ ಅದು ಇನ್ನೂರೋ ಮುನ್ನೂರೋ, ನಮಗೆ ಹತ್ತು ಸಾವಿರ ಅಂತ ಲೆಕ್ಕ’
’ಹೌದಮ್ಮಾ, ಸಾಕಮ್ಮನ ನೆಂಟರೋನು ಇದ್ದ ಒಬ್ಬ ಹುಡುಗ. ಅವನೂ ಈಗ ಬೆಂಗಳೂರಲ್ಲೇ ಇದ್ದಾನೆ. ಈವಾಗೇನು ಅವನಿಗೆ ಮೂವತ್ತೋ,ನಲ್ವತ್ತೋ ಆಗೋಗಿರತ್ತೆ. ‘ರಾತ್ರಿ ಹೋಗಿ ಹಗಲು ಬರೋದು’ ಅಂತ ಕೆಲಸಕ್ಕಾ ನೀನು ಹೋಗೋದು?’
’ನಂದು ಆ ಥರಾ ಕೆಲಸ ಅಲ್ಲಾ ಅಜ್ಜಿ’
’ಹ್ಞೂ, ಹುಡುಗ್ರು ಬೇಕಾದ್ರೆ ಯಾವಾಗ ಬೇಕಾದ್ರೂ ಹೋಗ್ಲಿ, ಬರ್ಲಿ. ನೀವುಗಳು ಹೋಗ್ಬೇಡಿ ಅಂತ ಕೆಲಸಕ್ಕೆ’
ರುಕ್ಕೂಗೆ ನಗು ಬಂದರು ತಡೆದು ’ಆಯ್ತಜ್ಜಿ’ ಅಂದಳು.

ಊರ ಹಳೆಯ ಸುದ್ದಿಯನ್ನೆಲ್ಲಾ ನೆನಪಿಸಿಕೊಳ್ಳುತ್ತಾ ಅಜ್ಜಿಯ ಜೊತೆ ಚೆನ್ನಾಗಿ ಹರಟಿದಳು. ಮಾತು ಮಾತಿಗೂ ಇಬ್ಬರಿಗೂ ತಡೆಯಲಾರದಷ್ಟು ನಗು ಬರುತ್ತಿತ್ತು. ಅಜ್ಜಿ ಮುಂಚಿನಂತೆಯೇ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಕೆಲವರನ್ನು ಹೊಗಳುತ್ತಾ, ಕೆಲವರನ್ನು ಬೈಯುತ್ತಾ ಮಾತು ಮುಂದುವರೆಸಿದರು. ರುಕ್ಕೂಗೆ ಮಾತ್ರ ಯಾವುದೋ ಕಣ್ಣುಗಳು ತನ್ನನ್ನೂ, ತನ್ನ ಅಜ್ಜಿಯನ್ನೂ ಸುತ್ತುತ್ತಿರುವಂತೆ ಅನ್ನಿಸುತ್ತಿತ್ತು. ಮಾತು ಮುಂದುವರೆಸುತ್ತಾ ’ಅಜ್ಜಿ ನೀನು ಈವಾಗ ಗೌಡರ ಮನೆಗೆ, ಸಾಕಮ್ಮನ ಮನೆಗೆ ಹೋಗಲ್ವಾ ಹರಟೆ ಹೊಡೆಯೋಕೆ’ ಎಂದು ಕೇಳಿದಳು. ’ಇಲ್ಲಮ್ಮಾ ನನಗೆ ಕಾಲಾಗದು. ಇನ್ನು ಮೇಲೆ ನನ್ನದೇನಿದ್ರೂ ಮನೆಯಿಂದ ಬಾಗಿಲಿಗೆ, ಬಾಗಿಲಿಂದ ಮನೆಗೆ ’ ಎಂದರು ಅಜ್ಜಿ. ಮಧ್ಯಾಹ್ನಕ್ಕೆ ಮೇವು ಹಾಕ್ತೀರ ಹಸೂಗೆ ಎಂದು ಕೇಳಿಕೊಂಡು ಜೋಳದ ಕಡ್ಡಿಗಳನ್ನು ಎಳೆದುಕೊಂಡು ಬಂದು ಹಸುಗಳ ಮುಂದೆ ಸುರಿದಳು.

’ತೋಟಕ್ಕಾದರೂ ಹೋಗೋಣ ಅಂದ್ರೆ, ಗುಣಾ ಏನೂ ಹಾಕಿಲ್ಲ ಅಂದ್ಳು. ಹ್ಞೂ, ಈ ಊರಲ್ಲಿ ಯಾರೂ ತೋಟ ಮಾಡಿದ ಹಾಗೆ ಕಾಣಿಸಲಿಲ್ಲ ನನಗೆ, ಚಿಕ್ಕ ಮಾವ ಅವರುಗಳೇನಾದ್ರೂ ಹಾಕಿರ್ತಾರೇನೋ...’ ಎಂದುಕೊಂಡು ಊರಿಗೇ ಕೇಳಿಸುವ ಹಾಗೆ ತನಗೆ ತಾನೇ ಮಾತಾಡಿಕೊಳ್ಳುತ್ತಿದ್ದಳು.
’ಈ ಊರಲ್ಲಿ ನೀರಿಲ್ಲ ನಿಡಿಯಿಲ್ಲ, ನಿನಗೆ ತೋಟ ಯಾರು ಮಾಡ್ತಾರೆ? ಭೂಮಿತಾಯಿ ಎಷ್ಟು ಬೇಕೋ ಅಷ್ಟನ್ನೆಲ್ಲಾ ನುಂಗಲಿ’ ಎಂದು ಅಜ್ಜಿ ಸ್ವಲ್ಪ ಸ್ವಲ್ಪವೇ ಧ್ವನಿಯೇರಿಸುತ್ತಿದರು.
’ಅದೇನು? ಕೆರೆಲಾದ್ರೂ ನೀರಿರಲೇಬೇಕಲ್ಲಾ? ನಾನು ಒಂದ್ಸಾರಿ ಹೋಗಿ ಬಟ್ಟೆ ಒಕ್ಕೊಂಡು ಬಂದಿದ್ದೆ’.
’ಕೆರೆಯೆಲ್ಲಾ, ಬತ್ತೋಗಿದೆ ಈವಾಗ. ಈ ಊರಿಗೆ ಮಳೆ ಬಂದು ಮೂರು ವರ್ಷ ಆಯ್ತು.’
’ಮೂರು ವರ್ಷದಿಂದ ಮಳೆ ಇಲ್ವಾ? ಎಂದು ಆಶ್ಚರ್ಯಪಡುತ್ತಿದ್ದವಳಿಗೆ ಥಟ್ಟನೆ ಕಾಣೆಯಾಗಿದ್ದ ಸರ್ವೇ ತೋಪು ನೆನಪಿಗೆ ಬಂತು.
’ಅಯ್ಯೋ ಇರ್ಲಿ ಬಿಡಜ್ಜಿ. ಒಂದ್ಸಾರಿ ಐದು ವರ್ಷ ಮಳೆ ಬಂದಿರ್ಲಿಲ್ಲವಂತೆ, ಅಮ್ಮ ಹೇಳ್ತಿದ್ರು. ಗುಣಾ ಹೇಳಿದ್ದಾಳಲ್ಲಾ ಮುಂದಿನ ಸಾರಿ ರಾಗಿ, ಭತ್ತ ಹಾಕಿ ಹೊಲ ಮಾಡ್ತಾರಂತೆ, ನೋಡಣ ಬಿಡಿ’.
’ಹೊಲ ಮಾಡ್ತಾರಂತಾ, ಹೊಲ ಮಾಡಕ್ಕೆ ಇವರಿಗೆ...’ ಎಂದು ಅಜ್ಜಿ ಮತ್ತೆ ಧ್ವನಿಯೇರಿಸತೊಡಗಿದರು.
’ಶ್ರೀ ರಾಮನ ಮನೆ ನೆಲ್ಲಿಕಾಯಿ ಮರ ಹಾಗೇ ಇದ್ಯೇನಜ್ಜಿ, ಹೋಗಿ ಒಂದಷ್ಟು ಕಿತ್ತುಕೊಂಡು ಬರ್ತೀನಿ’ ಎಂದು ಜೋರಾಗಿ ಮಾತನಾಡಿ ಅಜ್ಜಿಯ ಧ್ವನಿಯನ್ನು ಉಡುಗಿಸಿದಳು.
’ಹೋ ನೆಲ್ಲಿಕಾಯಿ ಮರನಾ? ಇರಬೋದೇನೋಮ್ಮ? ಊಟಕ್ಕೇನಾದ್ರೂ ಏಳ್ತಾರೇನೋ ನೋಡೋಗು, ಮಧ್ಯಾಹ್ನ ಆಗ್ತಾ ಬಂತು’ ಎಂದರು. ತನ್ನ ಅತ್ತೆ ಆಗಲೇ ಗೊಣಗುಟ್ಟಿದ್ದನ್ನು ನೆನಪಿಸಿಕೊಂಡು ರುಕ್ಕೂ ಒಳಕ್ಕೆ ಹೊರಟಳು.

6 ಕಾಮೆಂಟ್‌ಗಳು:

  1. ಚೆನ್ನಾಗಿದೆ. ಹಳ್ಳಿಯ ವಿಷಾದಪೂರ್ಣ ಬದುಕಿನೊಂದಿಗೆ ಇಂದಿನ ಐಟಿ ಮಂದಿಯ ಐಷಾರಾಮ ಜೀವನದೊಂದಿಗೆ ನವಿರಾದ ಹೋಲಿಕೆ ಇದೆ.

    ಪ್ರತ್ಯುತ್ತರಅಳಿಸಿ
  2. @ ಚಂದ್ರಕಾಂತ,

    ಬಹಳ ಆಶ್ಚರ್ಯಕರವೆನಿಸುತ್ತಿದೆ! ನಾನು ಈ ಆಯಾಮವನ್ನು ಗಮನಿಸಿರಲೇ ಇಲ್ಲ :)

    ಪ್ರತ್ಯುತ್ತರಅಳಿಸಿ
  3. ಅದೇ ನಿನ್ನ ಬರವಣಿಗೆಯ ವೈಷಿಷ್ಟ್ಯ.:))

    ಮಂಗಳಸೂತ್ರದ ಬಗೆಗಿನ ನಿನ್ನ ಲೇಖನವನ್ನು ಬ್ಲಾಗಿಗೆ ಹಾಕು.

    ಪ್ರತ್ಯುತ್ತರಅಳಿಸಿ
  4. ningu hogthaane haththa? :) odi nagu banthu....

    nanna hallige karedu kondu hoguththa ide nimma kathe.... adeshtu nenapugalu....

    ಪ್ರತ್ಯುತ್ತರಅಳಿಸಿ