ಗುರುವಾರ, ಡಿಸೆಂಬರ್ 25, 2008

’ಕ್ಯಾಮರಾ ದರ್ಶನ!’

ನಾನು ಚಿಕ್ಕವಳಿದ್ದಾಗ ಲೈನೆಂಬೋ ಕ್ಯೂನಲ್ಲಿ ನಿಂತು,ನೂಕು ನುಗ್ಗಲಿನಲ್ಲಿ ಸಿಕ್ಕಿ, ಬೆವರಿ ಸುಸ್ತಾಗಿ ಬಿದ್ದು, ಕಾಲುಳುಕಿ ಅವಸ್ಥೆ ಪಟ್ಟಾಗಿನಿಂದ ನಮ್ಮಮ್ಮ ನನ್ನನ್ನು ’ದೇವಸ್ಥಾನಕ್ಕೆ ಹೋಗು’ ಅಂತ ಬಲವಂತ ಮಾಡುವುದನ್ನು ಬಿಟ್ಟುಬಿಟ್ಟಿದ್ದರು. ಬಾಯಿತಪ್ಪಿ ಕನಸಿನಲ್ಲಿ ವೆಂಕಟರಮಣ ಬಂದಿದ್ದ ಎಂದು ಹೇಳಿದಾಗಿನಿಂದ, ಮುಂದಿನ ತಿಂಗಳು ಬರುತ್ತಿದ್ದ ವೈಕುಂಠ ಏಕಾದಶಿಯನ್ನೇ ಎದುರು ನೋಡಲು ಶುರು ಮಾಡಿದರು.

ಆ ದಿನ ಬಂದದ್ದೇ ತಡ, ಬೆಳಿಗ್ಗೆಯೇ ’ದರ್ಶನ ಮಾಡ್ಕೊಂಡು ಬಾ’ ಎಂದು ಅಡುಗೆ ಮನೆಯಿಂದ ಆಜ್ಞೆ ಹೊರಡಿತು. ಹಾಲ್ ಟಿಕೆಟನ್ನು ಗಣೇಶನ ಹತ್ತಿರ, ಪೆನ್ ಬಾಕ್ಸನ್ನು ಸರಸ್ವತಿ ಹತ್ತಿರ ಇಟ್ಟು ಪೂಜೆ ಮಾಡಿಸಿಕೊಂಡು, ಅರಿಶಿನ ಕುಂಕುಮ ಮೆತ್ತಿಸಿಕೊಂಡ ಅವುಗಳನ್ನೂ, ಪ್ರಸಾದವನ್ನೂ, ತರುತ್ತಿದ್ದ ನನ್ನ ಸ್ನೇಹಿತೆಯರು ಇದ್ದಕ್ಕಿದ್ದ ಹಾಗೆ ನೆನಪಾಗಿಬಿಟ್ಟರು. ನಾನೂ ಹಾಗೆ ಮಾಡಬೇಕೆಂಬ ಆಸೆಯನ್ನು ತಾಳಲಾರದೆ, ಹಳೆಯದೊಂದು ಚಪ್ಪಲಿ ಏರಿಸಿ, ಒಂದೆರೆಡು ಕಾಯಿನ್ನುಗಳನ್ನು ದಕ್ಷಿಣೆಗೆ ಹಿಡಿದು, ದರಬರ ದೇವಸ್ಥಾನದ ಕಡೆಗೆ ನಡೆದೆ. ಇಂಥ ಮಹತ್ತರ ಕಾರ್ಯ ಕೈಗೊಳ್ಳಲು ಇನ್ನೂ ಒಂದು ಮುಖ್ಯ ಕಾರಣ ಇತ್ತು. ದೇವಸ್ಥಾನದಲ್ಲಿ ಈ ವರ್ಷ ಕ್ಯಾಮರ ಇಟ್ಟಿದ್ದಾರೆ, ಲೋಕಲ್ ಕೇಬಲ್ಲಿನಲ್ಲಿ ಲೈವ್ ಟೆಲಿಕಾಸ್ಟ್! ಅಂತೂ ವೈಕುಂಠ ಏಕಾದಶಿದಿನ ವೈಕುಂಠ ದ್ವಾರವನ್ನು ಹೊಕ್ಕಲು ವೆಂಕಠರಮಣ ನನ್ನನ್ನೂ ಪ್ರೇರೆಪಿಸಿದ್ದ!

ನಾನು ದೇವಸ್ಥಾನದ ರೋಡಿಗೆ ನಡೆಯಲೇ ಬೇಕಾಗಲಿಲ್ಲ, ಕ್ಯೂ ಮೂರನೇ ರೋಡಿಗೆ ಬಂದು ಬಿಟ್ಟಿತ್ತು. ನಾನು ನಿಂತು ನಿಂತು ಮುಂದಕ್ಕೆ ಹೋಗಲು ಶುರುಮಾಡಿದೆ. ಇನ್ನೇನು ದೇವಸ್ಥಾನದ ರಾಜಗೋಪುರ ಕಾಣಿಸುತ್ತಿದೆ ಅಂದುಕೊಳ್ಳುವಷ್ಟರಲ್ಲಿ, ’ಮೈಸೂರು ಸಿಲ್ಕ್ಸ್ ಅಂಡ್ ಸ್ಯಾರೀಸ್’ ’ಕೋಲ್ಗೇಟ್ ನಿಮ್ಮ ಹಲ್ಲುಗಳಿಗೆ’ ಅಂದುಕೊಂಡು ಫಲಕಗಳು ರಾಜಗೋಪುರದ ಮೇಲೆ ರಾರಾಜಿಸುವುದನ್ನು ಕಂಡು ಒಂದು ನಿಮಿಷ ದಿಗ್ಭ್ರಮೆಗೊಂಡೆ. ಹಾ! ದಿಗ್ಭ್ರಮೆ ಪಟ್ಟುಕೊಳ್ಳುವುದಕ್ಕೆ ಸಮಯವೆಲ್ಲಿ? ನನ್ನ ಹಿಂದೆ ನಿಂತಿದ್ದ ದಢೂತಿ ಹೆಂಗಸೊಬ್ಬಳು ’ಜಾಗ ಆಗ್ಲಿಲ್ವಾ? ನಡಿಯಮ್ಮ ಮುಂದಕ್ಕೆ’ ಎಂದು ತಳ್ಳುತ್ತಲೇ ಎಚ್ಚರವಾಯಿತು.

ಒಳಗೇ ಹೋಗುತ್ತಲೇ ಆಯಮ್ಮನಿಗೆ ತುಂಬಾ ಬೇಜಾರಾಗಿರಬೇಕು... ಕ್ಯಾಮರಾವನ್ನು ನೋಡಿದ ಕೂಡಲೇ ಹಿಂದಕ್ಕೆ ತಿರುಗಿ ಹುಳ್ಳಗೆ ನಕ್ಕು, ’ಹೆ... ಹೆ... ನೀವು ನಡೀರಿ ಮುಂದೆ’ ಎಂದು ತನ್ನ ಹಿಂದೆ ನಿಂತಿದ್ದವರಿಗೆ ಕೈ ತೋರಿಸಿದಳು. ಹಾಗೂ ಹೀಗೂ ಸಣ್ಣಗಿದ್ದ ಇಬ್ಬರು ಮೂವರು, ಹಗ್ಗಕ್ಕೂ ಆಯಮ್ಮನ ದೇಹಕ್ಕೂ ಇದ್ದ ಸಣ್ಣ ಗ್ಯಾಪಿನಲ್ಲಿ ತೂರಿಕೊಂಡು ಮುಂದಕ್ಕೆ ಹೋದರು. ಆಯಮ್ಮನ ಮೇಕಪ್ಪಿಗೆ ಟೈಮ್ ಸಿಕ್ಕಿತು.

ಅಷ್ಟರಲ್ಲೇ ಅಲ್ಲಿದ್ದ ಚಿಲ್ಟಾರಿಯೊಂದು, ’ಏ ಏನ್ಗೊತ್ತಾ, ಅಲ್ನೋಡು ಕ್ಯಾಮರ ಇಟ್ಟುಕೊಂಡಿದ್ದಾರೆ, ಇಲ್ಲಿ ಟೀವಿ ಇಟ್ಟಿರ್ತಾರೆ, ನೀನು ಹೋಗಿ ಟೀವಿ ನೋಡು, ನಾನು ಕಾಣಿಸ್ತೀನಿ, ಆಮೇಲೇ ನಾನು ನೋಡ್ತೀನಿ ನೀನು ನಿಂತ್ಕೋ’ ಅಂತ ತನ್ನ ವಿದ್ಯೇನೆಲ್ಲ ಇನ್ನೊಂದಕ್ಕೆ ಧಾರೆಯೆರೆಯಿತು. ಅವರ ಈ ಸರದಿ ಮೇಲಿನ ಸರದಿ ಆಟ, ಒಬ್ಬ ಶಾಸ್ತ್ರೀ ಆವಾಜ್ ಹಾಕುತ್ತಲೇ ನಿಂತು ಹೋಯಿತು.

ಈ ಕ್ಯಾಮರ ಚಳಕ ಇಲ್ಲಿಗೆ ನಿಲ್ಲಲಿಲ್ಲ. ಮೌನ ಗೌರಿಯ ಹಾಗೆ ಕೈ ಮುಗಿದು ಬರುತ್ತಿದ್ದ ಹೆಂಗಸೊಬ್ಬಳು, ಇದ್ದಕ್ಕಿಂದ ಹಾಗೆ ನೈವೇದ್ಯ ಮಾಡುವಂತೆ ಕೈ ಆಡಿಸುತ್ತಾ, ವೆಂಕಟರಮಣನನ್ನು ಹಾಡಿ ಹೊಗಳಲು ಶುರುಮಾಡಿಬಿಟ್ಟಳು. ಇನ್ನೊಬ್ಬಾತ, ಸಾಷ್ಟಾಂಗ ನಮಸ್ಕಾರ ಮಾಡಲು ಹೋಗಿ ಶಾಸ್ತ್ರಿಗಳ ಹತ್ತಿರ ಬೈಸಿಕೊಳ್ಳುವ ಹಾಗಾಯಿತು, ಪಾಪ!

ಹಾಗೂ ಹೀಗೂ ಎರಡೂ ಪಕ್ಕ ಕಟ್ಟಿದ್ದ ಮರದ ಕಟ್ಟಿಗೆಗಳಿಂದ ತಪ್ಪಿಸಿಕೊಂಡು ಹೊರಗಿನ ಆವರಣಕ್ಕೆ ಬಂದೆವು. ಇನ್ನೇನು ಹೋಗೋದು ತಾನೆ ಎಂದು ಯೋಚಿಸುತ್ತಿರುವಾಗಲೇ, ಪಕ್ಕದಲ್ಲಿದ್ದ ಅಜ್ಜಿ ಮೇಲೆ ಕೂತಿದ್ದ ವೆಂಕಟರಮಣನನ್ನು ತೋರಿಸುತ್ತಾ, ’ನಡೆಯಮ್ಮ ವೈಕುಂಠ ದ್ವಾರಕ್ಕೇ’ ಎಂದರು. ’ನನಗೆ ಅರ್ಜೆಂಟಿಲ್ಲಾ, ನೀವು ಹೋಗಿ’ ಎಂದು ಹೇಳಲು ಧೈರ್ಯ ಸಾಲದೇ ಸುಮ್ಮನೇ ಅವರ ಹಿಂದೆ ಹೊರಟೆ.

ಇಲ್ಲಿ ನೋಡಿದರೆ ಇನ್ನೊಂದು ಕ್ಯಾಮರಾ...

ಬಹುಶಃ ಜೊತೆಗೆ ಬಂದಿದ್ದ ಒಂದು ಜೋಡಿ ಬೇರೆ ಬೇರೆ ಆಗಿಬಿಟ್ಟಿತ್ತು ಎಂದು ಕಾಣುತ್ತದೆ. ನನ್ನ ಪಕ್ಕದಲ್ಲಿ ನಿಂತಿದ್ದ ಗಂಡಿಗೆ ತಕ್ಷಣವೇ ಒಂದು ಉಪಾಯ ಹೊಳೆಯಿತು. ಮೊಬೈಲ್ನಿಂದ ಕಾಲು ಮಾಡಿ ’ವೇರ್ ಆರ್ ಯೂ?’ ಎಂದು ಕೇಳಿದ. ಆ ಧ್ವನಿ ಏನು ಹೇಳೀತೋ ಏನೋ ’ವೇರ್?’ ವೇರ್?’ ಎನ್ನುತ್ತಾ ಸುತ್ತಲೂ ಕಣ್ಣಾಡಿಸಿದ. ಅವನ ಕಣ್ಣು ಅಲ್ಲಿಯೇ ನಿಂತಿದ್ದ ಟೀವಿ ಸ್ಕ್ರೀನನ್ನು ಸ್ಕ್ಯಾನ್ ಮಾಡಲು ತೊಡಗಿತು. ಕಡೆಗೇ ಆ ಹುಡುಗಿ, ಕ್ಯಾಮರ ಮುಂದೆ ಬಂದು ’ಐ ಯಾಮ್ ಹಿಯರ್’ ಎಂದಿತು. ಇವನು ಆ ಜಾಗವನ್ನು ಟ್ರೇಸ್ ಮಾಡಿಕೊಂಡು ಹೋದ. ಜೋಡಿ ಒಂದಾಯಿತು.

ಇನ್ನು ಕ್ಯಾಮರದಲ್ಲಿ ಬರಲು ’ವೆಂಕಟರಮಣ’ನ ಸರದಿ. ’ಇಲ್ಲಿ ಚೆನ್ನಾಗಿ ಕಾಣ್ತಿದೆ. ನಿಂತ್ಕೊಂಡು ಸ್ವಲ್ಪೊತ್ತು ನೋಡಿ’ ಆ ಅಜ್ಜಿಯ ಇನ್ನೊಂಡು ಸಲಹೆ. ಎಲ್ಲರಿಗೂ ಸೂಚನೆ ಸರಿಯೆನಿಸಿತು. ಆವಾಗಲೇ ನನಗೂ ಹೊಳೆದಿದ್ದು, ಕ್ಯಾಮರ ಬೆಳಕಿಗೆ ಕಣ್ಣು ಮುಚ್ಚಿದ್ದ ನಾನು ದೇವರ ದರ್ಶನವನ್ನೇ ಮಾಡಿಲ್ಲ. ನಮ್ಮ ’ಶ್ರೀ ವೆಂಕಟರಮಣ ’ ಡೆಕೊರೆಟಿವ್ ಹೂಗಳನ್ನು ಏರಿಸಿಕೊಂಡು ಟಿಪ್ ಟಾಪ್ ಆಗಿಬಿಟ್ಟಿದ್ದ. ತನ್ನ ಮುಂಬಾಗಿಲು ಎಲ್ಲವನ್ನೂ ಆ ಹೂಗಳಿಂದಲೇ ಅಲಂಕರಿಸಿಕೊಂಡಿದ್ದ. ಕನಕಾಂಬರ, ಸೇವಂತಿಗೆ ಎಲ್ಲಾ ಬೇಜಾರಾಗಿತ್ತೋ ಏನೋ? ಅಂತೂ ಕ್ಯಾಮರದಲ್ಲಿ ದರ್ಶನ ಮುಗಿಸಿಕೊಂಡು ಮನೆಗೆ ಬಂದೆ.

ನಾನು ಬರುತ್ತಿದ್ದಂತೆಯೇ, ಮನೆಯಲ್ಲಿ ಲೋಕಲ್ ಚ್ಯಾನಲ್ ನೋಡುತ್ತಿದ್ದ ಎಲ್ಲರಿಗೂ ಮುಸಿಮುಸಿ ನಗು, ’ಏನು ಒಂದು ಕ್ಯಾಮರ ಬೆಳಕು ತಡೆಯೋದಕ್ಕೆ ಆಗಲಿಲ್ಲವಾ? ಅದಕ್ಕೆ ಹೇಳೋದು ನಿನಗೆ ಗೂಬೆ ಕಣ್ಣು...’ ಎಂದು ಜೋರಾಗಿ ನಗು. ನನಗೂ ಯಾಕೋ ಕೋಪ ತಡೆಯಲಾಗಲಿಲ್ಲ. ’ತಿರುಗಿ ನನ್ನನ್ನು ದೇವಸ್ಥಾನಕ್ಕೆ ಹೋಗು ಎನ್ನಬೇಡ ಅಮ್ಮಾ...’ ಎಂದು ಕಿರುಚಿ ರೂಮಿನ ಬಾಗಿಲು ದಢಾರನೆ ಹಾಕಿದೆ. ಬಿಸಿ ಬಿಸಿ ಪುಳಿಯೋಗರೆ ಪೂರ್ತಿ ನನ್ನ ಪಾಲಿಗೇ ಉಳಿದಿದ್ದಕ್ಕೆ ಒಂದು ಥರ ಖುಷಿ ಆಗ ತೊಡಗಿತು.

ಮಂಗಳವಾರ, ನವೆಂಬರ್ 11, 2008

ಸಯಾರಿಗಿ ಓರಿದಿ!

ಓವುದುದು ಹೇಗೆ? ಯಾತ್ತಾದವರು ಯೋದ್ದೀಸಿಚಿರ? ಇಲ್ಲಿ ಕೈಗಿತಪ್ಪಾದೆ ಎಂದು ಖಂಡಿತ ಭಾಸಬೇವಿಡಿ. ಮುಂದೆ ಓದದಿರೆ ಸಯಾರಿಗಿ ತಿಯುತ್ತಳಿದೆ!

ಬ್ರಿನ್ನಿಟನ್ನ ಯೂಯೊಂವನಿದಟಿರ್ಸಿರ ಸಂಯಿಂಧಶೋನೆದ ಈ ವಿಷಯ ಬೆಕಿಳಗೆ ಬಂದಿದೆ. ಒಂದು ಪದದಲ್ಲಿ ಅರಗಳಕ್ಷನ್ನು ಯಾವ ರೀಯತಿಲ್ಲಿ ಜೋದ್ದಾಸಿಡಿರೆ ಎಂಬುದು ಮುವಖ್ಯಲ್ಲ. ಮೊಲಿದನ - ಕೊನೆಯ ಅಗರಕ್ಷಳು ಸ್ವಲ್ಲಿದಸ್ಥಾದ್ದನರೆ ಸರಿ. ಮದಲ್ಲಿಧ್ಯನ ಅರಗಕ್ಷಳು ಚೆಲ್ಲಿದಲ್ಲಾಯಾಪಿರೂ ಚಿಂಯಿತೆಲ್ಲ. ಯಾದಕೆಂರೆ ಓವಾದುಗ ಒಂದು ಪವದನ್ನು ಇಯಾಡಿಗಿ ಓವೆದುತ್ತೇಯೆ ಹೊರತು ಅರಕ್ಷದ ನಂತರ ಅರವಕ್ಷಲ್ಲ.

ಇಂಗ್ಲೀಷಿನ ಮೂಲ ಇಲ್ಲಿದೆ:
This is quite amazing! really.

Aoccdrnig to a rscheearch at an Elingsh uinervtisy, it deosn't mttaer in waht oredr the ltteers in a wrod are, the olny iprmoetnt tihng is taht frist and lsat ltteer is at the rghit pclae. The rset can be a toatl mses and you can sitll raed it wouthit porbelm. Tihs is bcuseae we do not raed ervey lteter by itslef but the wrod as a wlohe.

ಸೋಮವಾರ, ಅಕ್ಟೋಬರ್ 27, 2008

ನಗರದ ರಾತ್ರಿ

ಕಾಲೇಜಿಗೆ ಹೋಗುತ್ತಿದ್ದಾಗ ಬರೆದಿದ್ದು. ಹೀಗೆ, ಕಸ ತೆಗೆಯುವಾಗ ಕೈಗೆ ಸಿಕ್ಕಿ ನಗು ಬರಿಸಿಬಿಟ್ಟಿತು. ನೀವೂ ಓದಿ ನೋಡಿ.

ರಜಿನಿ,
ನಿನ್ನ ಒಡಲಲ್ಲಿ,
ಮೇಲೊಂದು ಚುಕ್ಕಿ,
ಕೆಳಗೊಂದು ಚುಕ್ಕಿ,
ಮೇಲೆ ಮತ್ತೊಂದು,
ಕೆಳಗೆ ಅದಕೊಂದು,
ವಿಶ್ವಾಮಿತ್ರಾ ಹುಟ್ಟಿಸಿದನೇನು ಅಣಕ?
ಊಹೂಂ, ಇದು ಸ್ವಯಂಕೃತಾಪರಾಧ!

ಇಲ್ಲಿ ಒಬ್ಬೊಬ್ಬನೂ ತ್ರಿಶಂಕು,
ಏಕೆ ನಾನು?
ಎಲ್ಲಿಗೆ ನಾನು?
ಏನು ನಾನು?
ಆಮೇಲೇನು?
ಯಾರಿಗೂ ಗೊತ್ತಿಲ್ಲ
ಬೇಕೆ? ಅದೂ ಇಲ್ಲ
ತಿಳಕೊಳ್ಳಲು ಸಮಯವಿಲ್ಲ!

ಭಾನುವಾರ, ಸೆಪ್ಟೆಂಬರ್ 28, 2008

ಸವಿತಾ

ಗಂಡಸರಿಗೆ ನಿಮ್ಮ ಸಂದೇಶವೇನು?...

ಸುಂದರಾಂಗನಾದ ಸುಬ್ಬಯ್ಯನನ್ನು ಬಿಡುಗಣ್ಣಿನಿಂದ ನೋಡುತ್ತಾ ತಾಳಿ ಕಟ್ಟಿಸಿಕೊಂಡಾಗ, ತಾನು ಈ ರೀತಿ ಪ್ರಶ್ನೆಯನ್ನು ಎದುರಿಸಬೇಕಾಗಬಹುದೆಂದು ಸವಿತಾಗೆ ಅನ್ನಿಸಿರಲಿಲ್ಲ. ಮೈಕನ್ನು ಹಿಡಿದ ನವೀನ ಇನ್ನೊಂದು ಸಾರಿ ಕೇಳಿದನು, ’ಭಯವಿಲ್ಲ ಹೇಳಿ’. ಸವಿತಾ ಉತ್ತರ ಕೊಡುವುದಕ್ಕೆ ಇನ್ನೂ ಒಂದು ಕ್ಷಣ ತಡೆಯಬೇಕಾಯಿತು.

ಸುಬ್ಬಯ್ಯ ಯಾವ ರೀತಿಯಿಂದಲೂ ಯಾರೂ ದೂಷಿಸುವುದಕ್ಕೆ ಕಾರಣನಾದ ವ್ಯಕ್ತಿಯೇ ಅಲ್ಲ. ಅವನ ಮನೆಯಲ್ಲೂ ಅಷ್ಟೆ, ಹಾದಿ - ಬೀದಿಯಲ್ಲೂ ಅಷ್ಟೆ. ತಾನಾಯಿತು ತನ್ನ ಕೆಲಸವಾಯಿತು. ಉಳಿದ ಅಣ್ಣ - ತಮ್ಮಂದಿರು ಸಣ್ಣ ಸಣ್ಣ ವಿಷಯಗಳಿಂದ ಹಿಡಿದು, ಆಸ್ತಿ ಮನೆ ಮಠಗಳವರೆಗೆ ಏನು ಕಿತ್ತಾಡಿದರೂ ಇವನು ಚಕಾರ ಎತ್ತಿದವನಲ್ಲ. ಅದನ್ನು ಸರಿಪಡಿಸಲು ತನ್ನಿಂದ ಆಗಬಹುದೇ ಎಂದು ಯೋಚಿಸಲೂ ಹೋಗಿರಲಿಲ್ಲ. ಮದುವೆಯಾಗುವಷ್ಟರಲ್ಲಿ ಮೂವತ್ತು ಕಳೆದಿದ್ದಿರಬಹುದು. ಆದರೆ, ಅವನೇನು ಹಾಗೆ ಕಾಣುತ್ತಿರಲಿಲ್ಲ.

ಸವಿತಾ ಮನೆಗೆ ’ನೋಡಲು’ ಬಂದ ಮೊದಲ ಗಂಡು ಇವನೇ. ಹತ್ತೊಂಭತ್ತು ತುಂಬಿದರೂ ಇನ್ನೂ ಯಾವ ಜಾತಕವೂ ಹೊಂದಿಕೆಯಾಗದಿದ್ದದ್ದು ಮನೆಯಲ್ಲಿ ಭಾರಿ ಗೊಂದಲ ಉಂಟುಮಾಡಿತ್ತು. ಅವಳ ಅಜ್ಜಿಯಂತೂ, ’ಹತ್ತೊಂಭತ್ತು ಅಂದರೆ ಸರ್ಕಾರ ಕೊಟ್ಟಿರೋದಕ್ಕಿಂತ ಒಂದು ವರ್ಷ ಹೆಚ್ಚಂತೆ’ ಎಂದು ದಿನಕ್ಕೆ ನೂರು ಬಾರಿ ಹೇಳಿ, ಸರ್ಕಾರದ ರೂಲನ್ನೆ ತಲೆಕೆಳಗು ಮಾಡುತ್ತಿದ್ದಳು. ಅಷ್ಟಾದರೂ, ಹೀಗೆ ದಿಢೀರಂತ ಒಂದು ಗಂಡಿನ ಜಾತಕ ಹೊಂದಿಕೊಂಡು, ’ಮುಂದಿನ ಒಂದೆರಡು ತಿಂಗಳಲ್ಲಿ ಮದುವೆ ಮುಗಿದು ಹೋಗಲಿ, ಆಮೇಲೆ ಆಷಾಢ’ ಎಂದು ಗಂಡಿನ ಕಡೆಯವರು ದುಂಬಾಲು ಬಿದ್ದಾಗ, ಅಜ್ಜಿಯನ್ನೂ ಸೇರಿಸಿ ಎಲ್ಲರಿಗೂ ನಾವು ಅಷ್ಟು ಅವಸರ ಮಾಡಬಾರದಿತ್ತು ಅನಿಸದೆ ಇರಲಿಲ್ಲ.

ಮದುವೆಯಾದ ಮೇಲೂ ಸುಬ್ಬಯ್ಯನ ಜೀವನದಲ್ಲಿ ಅಂತಹ ಬದಲಾವಣೆಯೇನೂ ಕಾಣಲಿಲ್ಲ. ಅವನು ಹಾಗೆ ಬದಲಾಗಬೇಕಾದ ಅಗತ್ಯವೂ ಇರಲಿಲ್ಲ. ಸವಿತಾಳಿಗೂ ಅಷ್ಟೆ. ಲೋಕಾರೂಢಿಯಲ್ಲಿ ಹೇಳುವುದಾದರೆ ಅವನು ತನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ದುಡಿದು ತಂದು ಹಾಕುತ್ತಿದ್ದ. ಸೀರೆ - ಹೂವು ತಂದು ಕೊಡುತ್ತಿದ್ದ. ಹೊರಗೆ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದ. ಊರಿನವರಿಗೆ ಬೇಕಾದ ಸಣ್ಣ ಪುಟ್ಟ ಸಹಾಯಗಳನ್ನು ಮಾಡುತ್ತಿದ್ದ. ಯಾವ ದುಶ್ಚಟವೂ ಇರಲಿಲ್ಲ. ಕಾಲಕ್ರಮೇಣ ಅವನಿಗೆ ಇಬ್ಬರು ಮಕ್ಕಳೂ ಆದರು. ಲಿಂಗ ಯಾವುದು ಎಂಬುದು ಈಗ್ಗೆ ಮುಖ್ಯವಲ್ಲ. ಅವೂ ಶಾಲೆಗೆ ಹೋಗಲು ಶುರುವಿಟ್ಟುಕೊಂಡವು. ಒಟ್ಟಿನಲ್ಲಿ, ಯಾರೂ ಬಾಯಿಬಿಡದಿದ್ದರೂ ಅವನೊಬ್ಬ ದೇವರಂತ ಮನುಷ್ಯ ಎಂಬ ಭಾವನೆ ಊರಿನವರಲ್ಲೆಲ್ಲಾ ಬೇರೂರಿಬಿಟ್ಟಿತ್ತು. ಸವಿತಾಗೆ ಅದರ ಬಗ್ಗೆ ಯೋಚಿಸುವ ಅಗತ್ಯವೂ ಇರಲಿಲ್ಲ. ಅಷ್ಟೇ ಏಕೆ, ತನ್ನ ಒಳ್ಳೆಯತವನ್ನು ಕಂಡು ಸುಬ್ಬಯ್ಯನಿಗೇ ಒಮ್ಮೊಮ್ಮೆ ಹುಬ್ಬೇರಿಸುವಂತಾಗುತ್ತಿತ್ತು.

ಆದರೆ, ಜೀವನ ಅಷ್ಟರಿಂದಲೇ ತೃಪ್ತಿಪಟ್ಟುಕೊಳ್ಳುವಂತಹುದ್ದಾಗಿರಲಿಲ್ಲ. ಮಕ್ಕಳು ಏನೇ ಕಿತ್ತಾಡಿದರೂ ಗಟ್ಟಿಯಾಗಿ ನಿಂತು ನೆಲೆ - ಬೆಲೆಯನ್ನು ಹುಷಾರು ಮಾಡಿಕೊಂಡಿದ್ದ ತಂದೆಯೂ ಒಂದೊಮ್ಮೆ ಇಲ್ಲವಾಗಲೇಬೇಕಾಯಿತು. ಇಷ್ಟು ದಿನ ಕೋಳಿ ಜಗಳವಾಡಿ ಸುಮ್ಮನಾಗುತ್ತಿದ್ದ ಅಣ್ಣ - ತಮ್ಮಂದಿರು ನಾಯಿ ನರಿಗಳಾದರು. ತಾಯಿ ಮೂಲೆ ಪಾಲಾದಳು. ಇಷ್ಟು ದಿನ ಸುಮ್ಮನಿದ್ದದ್ದು ಸರಿಯೇ, ಇನ್ನು ಮುಂದೆ ಹೀಗಾದರೆ ಉಳಿಗಾಲವಿಲ್ಲ ಎಂದು ಸುಬ್ಬಯ್ಯನಿಗೆ ಕಿವಿಮಾತು ಬರಲಾರಂಭಿಸಿತು. ಆದರೆ, ಅವನು ಏನು ಮಾಡಲು ಹೋದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಜನ ಊರಿನಲ್ಲಿ ಇರಲಿಲ್ಲ. ಅಣ್ಣ - ತಮ್ಮಂದಿರಿಗಂತೂ ಈ ಗುಬ್ಬಚ್ಚಿಯ ಮಾತು ಕೇಳುವುದರಲ್ಲಿ ಯಾವ ಪ್ರಯೋಜನವೂ ಕಾಣಲಿಲ್ಲ. ಇವನನ್ನು ಹತ್ತಿಕ್ಕುವುದು ಅವರಿಗೇನು ಕಷ್ಟದ ಕೆಲಸವಾಗಲಿಲ್ಲ. ದಾಂಢಿಗರಾಗಿದ್ದ ತಾವೆಲ್ಲಾ ಸೇರಿ ಹೇಗಾದರೂ ಪರಿಹಾರ ಹುಡುಕುವುದು ಅವರ ಗುರಿಯಾಗಿತ್ತೇ ಹೊರತು, ನ್ಯಾಯ ನೀತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಯಾರಿಗೂ ಸಮಯವಿರಲಿಲ್ಲ. ಇದರಲ್ಲಿ, ತಮ್ಮ ಹೆಂಡತಿ ಮಕ್ಕಳ ಕ್ಷೇಮ - ಭವಿಷ್ಯಗಳು ಮುಖ್ಯವಾಗಿತ್ತೆ ಹೊರತು, ಸ್ವಾರ್ಥವೇನು ಇರಲಿಲ್ಲ.

ತನ್ನ ಗಂಡನ ಮೌನ ಇತ್ತೀಚೆಗೆ ಸವಿತಾಳಿಗೆ ಕೋಪ ಬರಿಸಲು ಶುರು ಮಾಡಿತ್ತು. ಅವಳು ಈಗೇನು ಸುಂದರವಾದ,ಮುಗ್ಧ ,ಹೆಂಗಳೆಯಾಗಿ ಉಳಿದಿರಲಿಲ್ಲ. ಊರಿನವರಿಗೂ ಅವನ ಈ ರೀತಿ ಸರಿ ಬರಲಿಲ್ಲ. ಸುಬ್ಬಯ್ಯ ಇಷ್ಟು ಹೆಣ್ಣು ಹೆಂಗಸಾಗಬಾರದಿತ್ತು ಎಂದು ಅವರ ಅನಿಸಿಕೆ! ಸುಬ್ಬಯ್ಯ ತನ್ನ ಕಷ್ಟವನ್ನು ತನ್ನ ತಾಯಿಯ ಬಳಿ ತೋಡಿಕೊಂಡ, ಪರಿಚಯದವರ ಬಳಿ ಹೇಳಿಕೊಂಡ, ತನ್ನ ಸೋದರರೆದುರು ನಿಂತು ತಾನು ಎಷ್ಟು ಒಳ್ಳೆಯತನದಿಂದ ಜೀವನ ನಡೆಸಿದ್ದೇನೆಂಬುದನ್ನು ಹೇಳಿದ್ದ. ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಅವನಿಗೆ ದೇವರ ಮೇಲೂ ಅನುಮಾನ ಶುರುವಾಗಲು ತೊಡಗಿತು. ಕಡೆಕಡೆಗೇ ಯಾರೂ ನನಗೆ ಅಯ್ಯೋ ಪಾಪ ಕೂಡ ಅನ್ನಲಿಲ್ಲವೇ ಎಂದು ಊರವರ ಮೇಲೆಯೆ ಸಿಟ್ಟು ಬರತೊಡಗಿತ್ತು. ಹೆಂಡತಿ ಕೋಪ ತಡೆಯಲಾರದೆ ಒಂದೆರಡು ಸಾರಿ ಮೂದಲಿಸಿದಳು. ಅವನಿಗೆ ಇದನ್ನಂತೂ ತಡೆಯಲು ಸಾಧ್ಯವೇ ಆಗಲಿಲ್ಲ. ತಾನು ಇಷ್ಟು ದಿನ ಮಾಡಿದ್ದೆಲ್ಲಾ ವ್ಯರ್ಥವೆನಿಸತೊಡಗಿತು.

ಕಡೇ ಪ್ರಯತ್ನವೆಂದು, ಕೋರ್ಟಿನಲ್ಲಿ ಹಾಕಿದ್ದ ಕೇಸು ಇವನಿಗೇ ಉಲ್ಟಾ ಹೊಡೆಯಿತು. ಅಣ್ಣ - ತಮ್ಮಂದಿರ ಆಸ್ತಿಯೆಲ್ಲ ಅವರ ಸ್ವಯಾರ್ಜಿತವೆಂದೂ, ಅದರಲ್ಲಿ ಇವನಿಗೆ ಹಕ್ಕು ದೊರೆಯುವುದು ಸಾಧ್ಯವಿಲ್ಲವೆಂದೂ ಕೋರ್ಟು ತೀರ್ಪು ಕೊಟ್ಟಿತು. ಸುಬ್ಬಯ್ಯ ತನ್ನೊಳಗೇ ಒಂದು ನಿರ್ಧಾರಕ್ಕೆ ಬಂದ. ಇನ್ನು ರೀತಿಯ ಬಾಳು ಬಾಳಿ ಏನೂ ಸುಖವಿಲ್ಲ.

ಸವಿತಾ ಬಾಗಿಲು ತೆಗೆದಾಗ, ತಾನು ಕನಸು ಮನಸಿನಲ್ಲೂ ನೆನಸದ್ದನ್ನು ನೋಡಬೇಕಾಯಿತು. ಸುಬ್ಬಯ್ಯ ಕುಡಿದು ಬಂದಿದ್ದ. ಹೇಗೆ? ಇದಕ್ಕೆ ಊರವರೆಲ್ಲ ಕುಳಿತು ಯೋಚಿಸಿದರೂ ಉತ್ತರ ಸಿಗುವುದು ಸಾಧ್ಯವಿರಲಿಲ್ಲ. ಅಂತೂ ಸುಬ್ಬಯ್ಯ ಆವತ್ತು ಕುಡಿದು ಬಂದಿದ್ದ. ಅದನ್ನು ಹೇಗೆ ಸಂಭಾಳಿಸಬೇಕೆಂಬುದು ಅವನಿಗೇ ತಿಳಿದಿರಲಿಲ್ಲ, ದಢಕ್ಕನೆ ನೆಲಕ್ಕೆ ಉರುಳಿದ. ಸವಿತಾಗೂ ಒಂದು ಕ್ಷಣ ಕರುಳು ಚುರುಕ್ಕೆನಿಸಿತು. ಇನ್ನೊಂದು ದಿನ ಊರ ಗೌಡರಿಂದ ಕಂಪ್ಲೇಂಟು ಬಂತು. ಸುಬ್ಬಯ್ಯ ಕೆಲಸಕ್ಕೆ ಸರಿಯಾಗಿ ಹೋಗುತ್ತಿಲ್ಲವಂತೆ! ನಾಲ್ಕನೇ ದಿನ, ಸವಿತಾಳ ವಾರಗಿತ್ತಿಯೇ ಎದುರು ಬಂದಳು. ’ಏನು ತಾಯಿ, ಕುಡಿದು ಬಂದು ಗಲಾಟೆ ಮಾಡ್ತಾನಲ್ಲ? ಆಳುಗಳ ಕೈಲಿ ಕತ್ತಿನ ಪಟ್ಟಿ ಹಿಡಿದು ಆಚೆ ತಳ್ತಿದ್ದ್ರೆ ನನಗೂ ಒಂಥರಾ ಅನ್ಸಲ್ವಾ?’ ಇದಕ್ಕೆ, ಏನು ಉತ್ತರ ಕೊಡಬೇಕೆಂದು ಸವಿತಾಳಿಗೇ ತಿಳಿಯದೆ ಹೋಯಿತು. ಅಂತೂ ಮನೆಗೆ ಬರುವಷ್ಟರಲ್ಲಿ ಅವನನ್ನು ಬಾಗಿಲ ಬಳಿ ನೂಕಿ ಹೋಗಿದ್ದರು! ಸವಿತಾ ಅವನನ್ನು ಎಳೆದು ತಂದು ಒಳಗೆ ಮಲಗಿಸಬೇಕಾಯಿತು.

ಇವತ್ತು, ನಾಳೆ, ಈಗ ಎಂದು ತನ್ನ ಗಂಡ ಕುಡಿತವನ್ನು ಬಿಡುವ ದಾರಿಯನ್ನೇ ನೋಡುತ್ತಿದ್ದಳು ಸವಿತಾ. ವಾರಕ್ಕೆ ಮೂರುದಿನವಾದರೂ ಕೆಲಸಕ್ಕೆ ಹೋಗುತ್ತಿದ್ದವ, ಈಗ ಅದನ್ನೂ ನಿಲ್ಲಿಸಿದ್ದ. ಎಷ್ಟು ದಿನ ಕುಡಿತಾನೆ ಎಂಬ ಧೈರ್ಯದ ಮೇಲೆ ಮಾಡಿದ ಸಣ್ಣ ಪುಟ್ಟ ಸಾಲಗಳನ್ನೂ ತೀರಿಸಲಾಗದ ಪರಿಸ್ಥಿತಿ ಬಂದು ಬಿಟ್ಟಿತು. ಎರಡು ದಿನ ಗಂಜಿ, ಒಂದು ದಿನ ಬರಿಯ ನೀರೇ ಗತಿಯಾಯಿತು. ಸವಿತಾಳ ಈ ಕಷ್ಟವನ್ನು ನೋಡಿ ಹಲವರು ಮರುಗಿದರು. ಊರಿನ ಹಿರಿಯರು ಅನ್ನಿಸಿಕೊಂಡವರಿಗಂತೂ ಹೇಳತೀರದ ಹಿಂಸೆ. ಹೆಂಗಸರಿಗೆ ಬರುವ ಇಂತಹ ಕಷ್ಟವನ್ನು ಸರಿಪಡಿಸುವುದಕ್ಕೆ ಅವರ ಬಳಿ ಯಾವ ಉಪಾಯವೂ ಇರಲಿಲ್ಲ.

ಶಾಲೆಗೆ ಹೋಗುವ ತನ್ನ ಮಕ್ಕಳ ಮತ್ತು ತನ್ನ ಹೊಟ್ಟೆ - ಬಟ್ಟೆಗಾಗಿ ಸವಿತಾಳೇ ದಿನಗೂಲಿ ಮಾಡುವ ನಿರ್ಧಾರ ಮಾಡಿದಳು. ಊರಿಂದೂರಿಗೆ ಹೋಗಿ ಬರುತ್ತಿದ್ದಳು. ಏತನ್ಮಧ್ಯೆ, ಲಾರಿಯಲ್ಲಿ ಹೇಗೋ ಇಟ್ಟಿದ್ದ ಕಬ್ಬಿಣದ ಸರಳೊಂದು, ಬ್ರೇಕು ಹಾಕಿದಾಗ ಜಾರಿ ಬಿದ್ದು ಎಡದ ಅಂಗೈಯನ್ನು ಮುರಿದು ಹಾಕಿತು. ವಿಧಿಯಿಲ್ಲದೇ ಒಂದೇ ಕೈಯಲ್ಲಿ ಕೆಲಸ ಮಾಡುವುದನ್ನು ಅಭ್ಯಾಸ ಮಾಡಿದಳು. ಜೀವನ ಮತ್ತೆ ಮುಂದುವರಿಯತೊಡಗಿತು. ಸುಬ್ಬಯ್ಯನನ್ನು ಹೇಗಾದರೂ ದಾರಿಗೆ ತರುವ ಪ್ರಯತ್ನ ಮಾಡತೊಡಗಿದಳು. ಯಾವುದಕ್ಕೂ ಅವನು ಬಗ್ಗುವ ಹಾಗೆ ಕಾಣಲಿಲ್ಲ.

ಊರವರೆಲ್ಲ ಸಲಹೆ ಕೊಟ್ಟರೂ ತನ್ನ ತವರು ಮನೆಗೆ ಹೋಗುವ ಯೋಚನೆ ಮಾಡಲಿಲ್ಲ. ಪರಿಸ್ಥಿತಿ ದಿನದಿನಕ್ಕೆ ಇನ್ನೂ ಹದಗೆಡತೊಡಗಿತ್ತು.ತಾನಾಯಿತು ತನ್ನ ಕುಡಿತವಾಯಿತು ಎಂದು ಇರುತ್ತಿದ್ದವ ಈಗ ದುಡ್ಡಿಗಾಗಿ ಸವಿತಾಳನ್ನು ಪೀಡಿಸತೊಡಗಿದ್ದ. ಅಷ್ಟಿಷ್ಟು ರಂಪವಾಗಿ ನಿಲ್ಲುತ್ತಿದ್ದ ಜಗಳ ಒಂದು ದಿನ ತಾರಕಕ್ಕೇರಿತು. ಸುಬ್ಬಯ್ಯ ಮಚ್ಚು ಹಿಡಿದು ತೂರಾಡುತ್ತಿದ್ದ. ನಿನಗೆ ವರ್ಷಾನುಗಟ್ಟಲೇ ತಂದು ಹಾಕಿದ್ದೆಲ್ಲಾ ಮರೆತುಹೋಯಿತಾ? ಈಗ ತೀರಿಸು ಋಣಾನ... ಸವಿತಾ ಮತ್ತೆ ಅವನ ಕುಡಿತದ ವಿಷಯಕ್ಕೆ ತಲೆ ಹಾಕಲಿಲ್ಲ. ನಿತ್ಯ ಅವನಿಗೆ ಕುಡಿತಕ್ಕೆ ದುಡ್ಡು ಕೊಡಬೇಕಾದ್ದು ಅನಿವಾರ್ಯವಾಯಿತು.

ಸವಿತಾಳ ಬದುಕು ಇನ್ನೂ ಮುಂದಕ್ಕೆ ಹೋಗುತ್ತಲೇ ಇತ್ತು. ಮಕ್ಕಳು ಯಾರ ಮನೆಯ ನೆನ್ನೆಯ ಸಾರು, ಉಳಿದ ಅನ್ನಕ್ಕೂ ಕೈ ಚಾಚುವಂತಿರಲಿಲ್ಲ. ಅಮ್ಮನಿಂದ ಬೀಳುತ್ತಿದ್ದ ಒದೆಯೆ ಅದಕ್ಕೆ ಕಾರಣವಾಗಿತ್ತು. ಪ್ರೈಮರಿ ಪಾಸು ಮಾಡಿ ಮಿಡ್ಲಿ ಸ್ಕೂಲಿಗೆ ಬಂದರು. ಪಕ್ಕದೂರಿನ ಪ್ರೈವೇಟು ಶಾಲೆಗೇ ಹೋದರು. ಸರ್ಕಾರದ ಸಾಲದಲ್ಲಿ ಒಂದು ಜಮೀನು ಖರೀದಿ ಮಾಡಿದ್ದಾಳೆ ಎಂಬ ಬಿಸಿ ಬಿಸಿ ಸುದ್ದಿ ಊರೆಲ್ಲಾ ಹಬ್ಬಿತು. ಇದ್ಯಾಕೋ, ಮತ್ತೆ ಊರವರಿಗೆ ಸರಿಬೀಳಲಿಲ್ಲ. ಈ ಬಾರಿ ಅವರ ಯೋಚನೆ ಹೀಗಿತ್ತು - ಏನಾದರೂ ಹೆಣ್ಣಿಗೆ ಇಷ್ಟು ಗಂಡುಬೀರಿತನ ಇರಬಾರದು.

ಇನ್ನು ಗಂಡೇ ಆಗಿದ್ದರೇ ಇನ್ನೇನೋ ಎಂದು ಕೆಲವರಿಗೆ ಚಿಂತೆಗಿಟ್ಟುಕೊಂಡಿತು. ಗಂಡಾಗಿದ್ದರೆ ನಮ್ಮ ಮನೆಯಲ್ಲೇ ಉಳಿಸಿಕೊಳ್ಳಬಹುದಿತ್ತಲ್ಲ ಎಂದು ತವರುಮನೆಯವರಿಗೂ ಅನಿಸಿತು.

ಸವಿತಾಳಿಗೆ ಇದಕ್ಕೆ ಏನು ಹೇಳಬೇಕೆಂದು ನಿಜವಾಗಿಯೂ ತಿಳಿಯಲಿಲ್ಲ. ಉತ್ತರ ಕೊಡುವ ಚಪಲವೂ ಅವಳಿಗಿರಲಿಲ್ಲ. ಪಕ್ಕದೂರಿಗೆ ಹೋಗುತ್ತಿದ್ದ ಮಕ್ಕಳು ತಮ್ಮ ಮನೆಯ ವಿಶೇಷ ವಿಷಯಗಳನ್ನು ಚಾಚೂ ತಪ್ಪದೆ ತಮ್ಮ ಗೆಳೆಯರ ಬಳಿ ಹೇಳುತ್ತಿದ್ದರು. ಆ ಊರಿನ ಕೆಟ್ಟು ಹೋದ ಪಂಪು ಸೆಟ್ಟುಗಳ ಬಗ್ಗೆ ವರದಿ ಮಾಡಲು ಬಂದಿದ್ದ ಟೀವಿಯವರಿಗೆ ಈ ಸುದ್ದಿ ಕೇಳಿದ್ದೇ ಎಲ್ಲಿಲ್ಲದ ಖುಷಿಯಾಯಿತು. ’ಗಂಡನ ಕುಡಿತಕ್ಕೆ ಹೆಂಡತಿಯೇ ಸ್ಪಾನ್ಸರರ್’ ವಿಶೇಷ ವರದಿ ಮುಂದಿನ ಸೋಮವಾರ ಹತ್ತು ಘಂಟೆಗೆ ಕ್ರೈಮ್ ಸ್ಟೋರಿಯಲ್ಲಿ ಪ್ರಸಾರವಾಗುವುದಿತ್ತು.

ಅದಕ್ಕೆ, ನವೀನ ಟೀವಿ ಚಾನ್ನಲ್ಲಿನವರೊಂದಿಗೆ ಊರಿಗೆ ಬಂದಿದ್ದನು. ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡಾಗಿತ್ತು ಸವಿತಾ. ಇಂತಹ ಕೆಟ್ಟ ಸಮಾಜವನ್ನೂ, ಕೆಟ್ಟ ಗಂಡನನ್ನೂ, ಅವಳನ್ನು ಮದುವೆ ಮಾಡಿಕೊಟ್ಟ ತವರುಮನೆಯವರನ್ನೂ ನವೀನ ಸಾರಾಸಗಟಾಗಿ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದನು.ಅವನು ಮಾತನಾಡುತ್ತಿದ್ದ ರೀತಿಗೆ ಅಲ್ಲಿ ನಿಂತ ಜನರೇ ಅಸಹ್ಯಪಡುವಂತಾಯಿತು. ಇಂತಹ ಅನ್ಯಾಯದ ವಿರುದ್ಧ ಹೋರಾಡಿ, ಜಮೀನು ಸಂಪಾದಿಸಿರುವ ಸವಿತಾಳನ್ನು ಹಾಡಿ ಹೊಗಳಿದನು. ಆದಷ್ಟು ಬೇಗ ಅವಳಿಗೆ ಸುಬ್ಬಯ್ಯನಿಂದ ಬಿಡುಗಡೆ ಕೊಡಿಸಿ, ಸ್ವತಂತ್ರಳನ್ನಾಗಿ ಮಾಡಬೇಕಾದ ಅಗತ್ಯವನ್ನು ಸಾರಿದನು.

ಕಡೆಯದಾಗಿ ಒಂದು ಪ್ರಶ್ನೆ - ಗಂಡಸರಿಗೆ ನಿಮ್ಮ ಸಂದೇಶವೇನು? ಕೇಳಿದನು ನವೀನ. ’ಭಯವಿಲ್ಲ ಹೇಳಿ’ ಮತ್ತೆ ಕೇಳಿದ. ಕ್ಷಣ ತಡೆದು ಸವಿತಾ ಹೇಳಿದಳು, "ಗಂಡಸರಿಗೊಂದು, ಹೆಂಗಸರಿಗೊಂದು ಹೇಳವುದಕ್ಕೆ ನನಗೇನು ಗೊತ್ತಿಲ್ಲ. ನನಗೆ ಸುಖ ಹೇಗೆ ಸಿಕ್ಕಿತೋ ಹಾಗೆ ಕಷ್ಟವೂ ಸಿಕ್ಕಿದೆ. ಎರಡನ್ನೂ ಅನುಭವಿಸುತ್ತಿದ್ದೇನೆ. ಕಷ್ಟ ಬಂದರೆ ಎದುರಿಸಿ. ನಾನು ನನ್ನ ಮಕ್ಕಳ ಕ್ಷೇಮಕ್ಕಾಗಿ ಓಡಿಹೋದರೆ, ಜೊತೆಯಲ್ಲಿ ಇರ್ತೇನೆ ಎಂದು ಅವರಿಗೆ ಕೊಟ್ಟ ಮಾತಿಗೆಲ್ಲಿ ಬೆಲೆ? ನಮಗೆ ಕ್ಷೇಮವಾಗಿರುವ ಕಡೆಗೆಲ್ಲಾ ಹೋಗುತ್ತಿದ್ದರೆ ಜೀವನವನ್ನು ಎದುರಿಸಿದ್ದು ಯಾವಾಗ?..."

ಸವಿತಾಳ ಮಾತು ನಿಂತ ಮೇಲೆ ನವೀನನ ಅಬ್ಬರ ಏಕೋ ಕಡಿಮೆಯಾದ ಹಾಗೆ ಕಾಣುತಿತ್ತು.

ಶುಕ್ರವಾರ, ಸೆಪ್ಟೆಂಬರ್ 12, 2008

ಶಿಶು ಪ್ರಾಸ ಇರಬಹುದು.......

ಲಾಭ - ನಷ್ಟ, ಕಾಸ್ಟ್ ಪ್ರೈಸ್ - ಸೆಲ್ಲಿಂಗ್ ಪ್ರೈಸ್ ಬಗ್ಗೆ ನಾಲ್ಕನೆ ಕ್ಲಾಸಿನ ಮಕ್ಕಳಿಗೆ ಆಟಗಳ ಸಿಡಿಗಳನ್ನು ಮಾಡುವ ಪ್ರಾಜೆಕ್ಟನ್ನು ಕೈಗೆತ್ತಿಕೊಂಡಿದ್ದಾರೆ, ನಮ್ಮ ಕಂಪನಿಯವರು. ಸರಿ, ನನಗೆ ಸಿಡಿ ಟೈಟಲ್ ಸಾಂಗ್ ಬರೆಯುವ ಕೆಲಸ - ಇಂಗ್ಲೀಷಿನಲ್ಲಿ. ಆದರೆ, ಆಗಿದ್ದೇನೂಂದ್ರೆ...


ಮೀಟೂನು ಕಿಟ್ಟುನೂ ಮಾಡ್ಬೇಕಂತೆ ಬಿಸಿನೆಸ್
ಯಾರಿಗೊತ್ತು? ಯಾರ್ಹೇಳ್ಕೊಡ್ತೀರ್? ಆಗ್ಲೆಬಾರ್ದು ಲಾಸಸ್

ಕಿಟ್ಟುಗಂತು ಅದೇ ಯೋಚ್ನೆ, ಎಷ್ಟೊಂದ್ ಜಾಸ್ತಿ ಕಾಸ್ಟು
ಸೆಲ್ಲಿಂಗ್ ಪ್ರೈಸ್ ಜಾಸ್ತಿ ಆಗ್ಲೇಬೇಕು ಹೇಗಾದ್ರೂ ಅಟ್ ಲಾಸ್ಟು

ಸೆಲ್ಲಿಂಗ್ಗಿಂತ ಕಾಸ್ಟ್ ಪ್ರೈಸೇ ಜಾಸ್ತಿ ಏನಾರ್ ಆದ್ರೆ
ಕಿಟ್ಟೂಗ್ ಚಿಂತೆ ಲಾಸಾಗಿ ಬಿಸಿನೆಸ್ ಬಿದ್ಗಿದ್ ಹೋದ್ರೆ

ಪರ್ಸೆಂಟ್ ಕಂಡು ಹಿಡಿಯೋದ್ರಲ್ಲಿ ಮೀಟು ಬಲು ಬಲು ಜಾಣ
ಅಷ್ಟಕಿಷ್ಟು, ಇಷ್ಟಕಷ್ಟು, ಹಂಗಾರ್ ನೂರಕೆಷ್ಟು? ಅನ್ನೋದೆ ಅದರ ಪ್ರಾಣ

ಅಂಗಡಿ ಕಟ್ಟಿ, ಸಾಮಾನ್ ತಂದು, ಕಿಟ್ಟು - ಮೀಟು ಜೋಡಿ
ಬಿಸಿನೆಸ್ ಮಾಡಿ, ಪ್ರಾಫಿಟ್ ಅಂತು ಬಂತೇ ಬಂತು ನೋಡಿ

ಶುಕ್ರವಾರ, ಆಗಸ್ಟ್ 15, 2008

ಅವಳ ಮನಸ್ಸು

ನನ್ನ ಅಕ್ಕ ಇಂಗ್ಲೀಷಿನಲ್ಲಿ ಬರೆದ ಪದ್ಯವನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಇದಕ್ಕೆ ಅವಳದ್ದೇ ಆರ್ಡರ್, ಅವಳೇ ಎಡಿಟರ್, ಡೈರೆಕ್ಟರ್ :).....


ಅವಳ ಮನದ ಬಾಗಿಲು ಹಾಕಿತ್ತು
ಬಹುದಿನಗಳಿಂದ
ಭದ್ರಪಡಿಸಿದ್ದಳು ಬಾಗಿಲನ್ನು
ಬಹುದೊಡ್ಡ ಬೀಗ ಹಾಕಿ


ಒಳಗಡೆ ಇಣುಕಲು ,
ಯಾರಿಗೂ ಸಾಧ್ಯವಾಗಿಲ್ಲ....
ಅದರಾಚೆಗೆ ಏನಿತ್ತು?
ಕತ್ತಲೆಯ ಮಡಿಲಲ್ಲಿ....
ಕಾಣದ ಕಡಲಾಳದಲ್ಲಿ...
ಮನದ ಸಾಮ್ರಾಜ್ಯದಲ್ಲಿ....
ತೋರದ ಜಗತ್ತಿನಲ್ಲಿ....


ಬೀಗದ ಕೈ ಕಳೆದು ಹೋಗಿತ್ತು
ಒಂಟಿತನದ ತಳವಿರದ ಬಾವಿಯಲ್ಲಿ

ಬೆಳ್ಳಿ ಮೀನುಗಳು ಹರಿದಾಡುತ್ತಿದ್ದವು
ಅವಳ ಮನದ ಪುಟಗಳಲ್ಲಿ...
ಯೋಚನೆಯ ಜೇಡವೊಂದು...
ಬಲೆಗಳನು ಹೆಣೆದುಬಿಟ್ಟಿತ್ತು ಅವಳ ಎದೆಯ ನಾಕು ಕೋಣೆಯಲ್ಲಿ


ಧೂಳು ಹಿಡಿದಿತ್ತು...ಪದರ...ಪದರವಾಗಿ
ಮೃದು,ಮಧುರವಾದದ್ದೇನೂ ಒಳಗೆ ಬರಲಾಗದಂತೆ

...ಬೆಚ್ಚಗಿನ ಸೂರ್ಯಕಿರಣಗಳು
...ಮುತ್ತಿನ ಮಣಿಗಳ ಮಂಜು
...ತಂಪಿನ ತಂಗಾಳಿ
ಯಾವುದಕ್ಕೂ ಅಲ್ಲಿ ಪ್ರವೇಶವಿಲ್ಲ...

ಗೆಳೆಯರು ಬಂದರು...
ಬೀಗ ತೆಗೆದು ನೋಡಲು,ಮನಸು ಹಗುರ ಮಾಡಲು...
ಏನೂ ಸುಖವಿಲ್ಲ...

ಅಸೂಯೆ ಹುಟ್ಟಿ, ಅವಳ ದಾರಿ ತಪ್ಪಿಸಲು ಬಂದರು ಕೆಲವರು
ಬಂದ ದಾರಿಗೆ ಸುಂಕವಿಲ್ಲ...

ಆ ದಿನ , ಆಷಾಡದ ಶುಕ್ರವಾರ
ಮುಳುಗಿದ್ದಳು ಅವಳು ಕಚೇರಿಯ ಕಡತ-ಡ್ರಾಯಿಂಗುಗಳಲ್ಲಿ,

ಗಾಳಿಗೂ ತನ್ನ ಅದೃಷ್ಟದ ಪರೀಕ್ಷೆ ಮಾಡಬೇಕೆನಿಸಿರಬೇಕು
………………ನವಿರಾಗಿ ಅವಳ ತಲೆಯ ಮೇಲೆ ಹಾಯ್ತು
ತನ್ನ ತಲೆಗೆ ಸಿಕ್ಕ ಹೇರುಪಿನ್ನನ್ನು, ಮತ್ತೂ ಬಿಗಿಯಾಗಿಸಿದಳು
ಗಾಳಿಗೆ ಅಲ್ಲೇನೂ ಕೆಲಸವಿರಲಿಲ್ಲ...


ಅವನು ಅವಳನ್ನೇ ನೋಡುತ್ತಿದ್ದ……
………ಎದುರಿನ ಕಿಟಕಿಗೆ ಒರಗಿ.


ಅವನು ಏನು ಹೇಳಬಹುದು? ಇವಳೇ ಊಹಿಸಿದಳು...
“ಆ ಬಿಗಿಯನ್ನು ತೆಗೆದುಬಿಡು...ಸುಂದರವಾಗಿ ಕಾಣುತ್ತೀಯೆ”

* * *

ಇದೇ ಮಾತು ಕೇಳಿ ಕೇಳಿ ಅವಳಿಗೂ ಬೇಸರವಾಗಿತ್ತು
ನೂರು ಸಲ, ಸಾವಿರ ಸಲ ಈ ಹಿಂದೆಯೂ ಕೇಳಿ ಆಗಿತ್ತು
ನೂರು ಜನ, ಸಾವಿರ ಜನ ಅದನ್ನೇ ಹೇಳಿದ್ದರು

ಇವಳು ಕುಂಟೇಬಿಲ್ಲೆಯಾಡುತ್ತಾ ಮನೆಯಿಂದ ಮನೆಗೆ ಎಗರುವಾಗ
…ಪಕ್ಕದಲ್ಲೇ ಗೋಲಿ ಆಡುತ್ತಿದ್ದ ಹುಡುಗರು
ಇವಳು ಮುಂದಿನ ಬೆಂಚಿನಲ್ಲಿ ಕೂತು ನೋಟ್ಸಿನೊಂದಿಗೆ ಒದ್ದಾಡುವಾಗ
…ಹಿಂದುಗಡೆ ಬೆಂಚಿನಲ್ಲಿ ಕೂತ ಹುಡುಗರು
ಇವಳು ಕೆಮಿಸ್ಟ್ರಿ ಲ್ಯಾಬಿನಲ್ಲಿ ಸಲ್ಯೂಷನ್ ತಯಾರಿಸುವಾಗ
…ಆಚೆಕಡೆಯ ಸಾಲಿನಲ್ಲಿ ನಿಂತ ಹುಡುಗರು

* * *
ಅವಳು ಫೈಲಿನೊಳಗೆ ಇನ್ನೂ ಮುಳುಗಲು ಪ್ರಯತ್ನಿಸಿದಳು
ಅವಳಿಗೂ ಗೊತ್ತು ಅದೇ ದಾರಿ ಎಂದು...
ಆದರೆ, ಅವನು ಅದನ್ನು ಹೇಳಲೇ ಇಲ್ಲ.....

"ಗಂಟು ತೆಗಿ ಒದ್ದೆ ಕೂದಲು , ತಲೆನೋವು ಬಂದೀತು...
ನನ್ನ ತಾಯಿ ಹೇಳುತ್ತಿದ್ದರು... ತಂಗಿಗೆ!
ಮುದ್ದು ತಂಗಿ ನನ್ನ ಹಿಂದೆ ಅಡಗುತ್ತಿದ್ದಳು...
ಅಮ್ಮ ಅವಳ ತಲೆಯನ್ನು ಬಲವಂತವಾಗಿ ಒರಸಲು ಬಂದಾಗ"

ಇದಿಷ್ಟೇ ಅವನು ಹೇಳಿದ್ದು...
ಅಷ್ಟು ಹೇಳಿ, ಅವನೂ ಕಳೆದುಹೋದ...
ತನ್ನ ಸವಿನೆನಪುಗಳಲ್ಲಿ......
ತನ್ನ ಆಲೋಚನೆಗಳಲ್ಲಿ......
ತನ್ನ ಮನೆಯ ಮೂಲೆಯಲ್ಲಿ..... ತುಂಬಾ ದೂರದಲ್ಲಿ...

ಅವಳ ಕೈಗೆ ಅದರದೇ ಮರ್ಜಿ ಬಂತೇನೋ.....
ಗಳಿಗೆಯಲ್ಲಿ ಅವಳ ಬಿಗಿ ಬೀಗದಿಂದ, ಕೂದಲು ಬಿಡಿಸಿಕೊಂಡಿತ್ತು.
.
.
.
.
.
.
ನವಿರಾದ ಮುಂಗುರೊಳೊಂದು ಕಚಗುಳಿಯಿಡುತ್ತಿದೆ...
ಗಾಳಿ ಅವಳ ರೇಷಿಮೆ ಕೂದಲೊಂದಿಗೆ ಆಟವಾಡುತ್ತಿದೆ...
ಅವಳು....
ಅವನೊಂದಿಗೆ, ಮುಸ್ಸಂಜೆಯಲ್ಲಿ, ಹೂದೋಟದಲ್ಲಿ...
ಸುಮ್ಮನೆ ನಕ್ಕುಬಿಡುತ್ತಾಳೆ,
ಅಂದಿನಿಂದ ಇಂದಿನವೆರೆಗೂ...
ಯಾರಿಗೂ ಅಗಿರಲಿಲ್ಲ...
ಅವನು ಬೀಗ ತೆಗೆದಿದ್ದಾದರೂ ಹೇಗೆ?!
ಅವಳ ಮನಸ್ಸಿನ ಬೀಗ ...
ಯಾವ ಕೈಯೂ, ಬುದ್ಧಿವಂತಿಕೆಯೂ ತೆಗೆಯಲಾಗದ ಬೀಗ

* * * * * *

ಮೂಲ ಪದ್ಯವನ್ನು ಓದಿ - http://geethascribbling.blogspot.com/2008/08/key.html. ಇದು ನನ್ನ ಮೊದಲ ಪ್ರಯತ್ನವಾದ್ದರಿಂದ ನಿಮ್ಮ ಕ್ರಿಟಿಕ್ಸ್ಗಾಗಿ ಕಾದಿದ್ದೇನೆ.

ಭಾನುವಾರ, ಜೂನ್ 1, 2008

ತರಗತಿಯಲ್ಲಿ......

ಆಸೆ ಬಿದ್ದು ಕರೆಸ್ಪಾಡೆಂನ್ಸಿನಲ್ಲಿ ಎಮ್.ಎ. ತಗೊಂಡು ಕಾಂಟ್ಯಾಕ್ಟ್ ಕ್ಲಾಸಿಗೆ ಹೋಗಿ ಕೂತರೆ ಅಲ್ಲಿ ಆದದ್ದೆ ಬೇರೆ.

* * *

ಪರೀಕ್ಷೆಯ ದಿನ ಒಂದೇ ಬಾರಿಗೆ ಬರೆಯಲು ಹೋದರೆ ಕೈ ನೋವು ಬರಬಹುದು. ಹೌದು, ಈಗಷ್ಟೇ ಕ್ಲಾಸು ಮುಗಿಸಿ ಹೋದ ಶಶಿಕಲಾ ಮೇಡಮ್ಮು ಇದನ್ನೇ ಹೇಳಿದರು. ಅದಕ್ಕೆ ಬರೆಯುವುದನ್ನು ಅಭ್ಯಾಸ ಮಾಡುತ್ತಿದ್ದೇನೆ. ಈ ಅಭ್ಯಾಸ ಮಾಡುವುದಕ್ಕೆ ಬಹುಶಃ ಇದಕಿಂತ ಪ್ರಶಸ್ತವಾದ ಸಮಯ ಸಿಗಲಾರದು.

ಮುಂದೆ ನಿಂತು ಮಾತನಾಡುತ್ತಿರುವ ಪ್ರಾಣಿಯ ಹೆಸರು ಸಣ್ಣಯ್ಯ. ’ಪಂಪ ಪೂರ್ವ ಯುಗದ ರೂಪು ರೇಷೆ’(ಕಾವ್ಯಗಳದ್ದು)- ಆಹಾ!ಎಂತಹ ವಿಷಯ ಪರೀಕ್ಷೆಗೆ. ನನಗೆ ಮೊದಲೇ ಹಳೆಯದ್ಯಾವುದನ್ನೋ ಹುಡುಕಿಕೊಂಡು ಹೋಗುವುದು ಬೇಜಾರಿನ ವಿಷಯ. ಲೈಬ್ರರಿಯಲ್ಲಿ ನಾನು ಹುಡುಕಿ ಓದುವುದು ಅಷ್ಟರಲ್ಲೇ ಇದೆ. ಇಲ್ಲಿ ಯಾರಾದರೂ ಪಾಠ ಮಾಡಿ ನನಗೂ ಏನಾದರೂ ಒಳ್ಳೆಯದಾಗಬಹುದೆಂದು ಆಶಿಸಿದ್ದೆ. ಊಹೂ... ಅಂಥದ್ದೇನೂ ಆಗುವ ಹಾಗೆ ಕಾಣುತ್ತಿಲ್ಲ. ಬರೆಯುತ್ತಿದ್ದಂತೆ ಕೈ ನೋವು ಬರುತ್ತಿದೆ.

ಬಹುಶಃ, ಈ ಮನುಷ್ಯನ ಕ್ಲಾಸಿನಲ್ಲಿ ಕೂರುವ ಬದಲು ಆತ ತಂದಿರುವ ಫೈಲಿನಲ್ಲಿರುವ ಪೇಪರುಗಳನ್ನು ಜೆರಾಕ್ಸು ತಗೊಂಡು ಓದಿಕೊಳ್ಳುವುದು ಉಪಯೋಗಕ್ಕೆ ಬರಬಹುದು. ಓಹೋ! ಮರೆತು ಹೋಯ್ತು ಅನಿಸುತ್ತದೆ.ಪೇಪರು ಹುಡುಕುತ್ತಿದ್ದಾರೆ. ಸರಿ, ಸರಿ, ಈಗ ಗೊತ್ತಾಯ್ತು, ಬಂದ ಕೂದಲೇ, ಫ್ಯಾನು ಆರಿಸಿ, ಕಡಿಮೆ ಮಾಡಿ ಎಂದು ಗೋಳಿಟ್ಟಿದ್ದು ಯಾಕೆ ಅಂತ.. ಪೇಪರು ಫೈಲಿನಿಂದ ಆರಿಹೋಗುತ್ತಿದೆ. ಪಾಪ! ಮೊಣಕೈಯಿಂದ - ಅಂಗೈವರೆಗೂ ಎರಡೂ ಕೈಗಳನ್ನು ಪೋಡಿಯಮ್ಮಿನ ಮೇಲೆ ಭದ್ರವಾಗಿ ಊರಿ ಪೇಪರುಗಳನ್ನು ಹಿಡಿತಲ್ಲಿಟ್ಟುಕೊಳ್ಳಲು ಪ್ರಯತ್ನ ಪಡುತ್ತಿರುವುದನ್ನು ನೋಡಿದರೆ ನಗು ಬರುತ್ತದೆ.

ಯಾವುದಾದಾರೂ ರಕ್ಷಣಾ ಪಡೆಯದ್ದೋ, ಕನ್ನಡ ವೇದಿಕೆಯದ್ದೋ ಮೆಂಬರಾಗಿರಬೇಕು ಈ ಮನುಷ್ಯ. ಮಾತುಮಾತಿಗೂ ಕನ್ನಡಾ ಮಾತೆ, ಕನ್ನಡ ಜನರ ಸಂವೇದನಾಶೀಲತೆ, ದೇಶಪ್ರೇಮ ಇವೇ ಮಾತುಗಳು. ’....ಗೋದಾವರಿ ನದಿ ಆಂಧ್ರ ಪ್ರದೇಶದಲ್ಲಿದ್ದರೂ... ಶ್ರೀ ವಿಜಯ ಕನ್ನಡದವನೇ.... ಸಾಮಾಜಿಕ ಒತ್ತಡಕ್ಕೆ ಬಲಿಯಾಗಿ ನಮ್ಮ ಜಾಗವನ್ನು ಬೇರೆಯವರಿಗೆ ನೀಡಿದ್ದೇವೆ’ ಎಂತಹ ವ್ಯಾಖ್ಯಾನ! ಭಾಷೆಯ ಬೆಳವಣಿಗೆಯ ಬಗ್ಗೆ ಬೇರೆ ಮಾತನಾಡುತ್ತಿದ್ದಾರೆ. ಇಂಗ್ಲೀಷಿಗೂ - ಸಂಸ್ಕೃತಕ್ಕೂ ನಂಟು ಬೇರೆ. ಹೋಓಓಓಓಓಓ...., ಕರೆಂಟು ಹೋಯ್ತು. ಇನ್ನು ಫೈಲಿನಲ್ಲಿರುವ ಪೇಪರುಗಳು ಕಾಣುತ್ತವೋ? ಇಲ್ಲವೋ? ಗಂಟೆ ಆರಾಯಿತು. ಅಯ್ಯೋ ಪಾಪ! ಇಂತಹ ಗತಿ ಬರಬಾರದಾಗಿತ್ತು.

....ಒಬ್ಬನು ಗುಣನಂದಿ, ಇಬ್ಬರು ಗುಣವರ್ಮ, ಒಬ್ಬ ಅದನ್ನು ಬರೆದವನು, ಇನ್ನೊಬ್ಬ ಇದನ್ನು ಬರೆದವನು... ಇಲ್ಲಿಗೆ ಪಂಪಪೂರ್ವ ಯುಗದ ರೂಪುರೇಷೆ ಮುಕ್ತಾಯವಾಯಿತು. ಮುಂದೆ ನಾವು ಯೋಚನೆ ಮಾಡಬೇಕಾಗಿರುವುದು..... ಪರೀಕ್ಷೆ ಪಾಸು ಮಾಡುವುದು ಹೇಗೆ ಎಂದು?@#$!$$
..... ೧ರಿಂದ ೯ನೇ ಶತಮಾನದವರೆಗೂ ಮುಗಿಸಿ ಈಗ ೧೦ನೇ ಶತಮಾನಕ್ಕೆ. ಅಂದರೆ, ೧-೪ನೇ ಪೇಜುಗಳನ್ನು ಓದಿ ಮುಗಿಸಿ ೫ನೇ ಪೇಜಿಗೆ ಬಂದಿದ್ದಾರೆ. ಹೋಗಿ ಬಾಗಿಲು ತೆಗೆಯುತ್ತಿದ್ದಾರೆ. ಆರೂವರೆ ಆಗುತಾ ಬಂತು. ಪಾಪ.. ಬೆಳಕು ಸಾಲದು, ಕರೆಂಟು ಬೇರೆ ಹೋಗಿದೆ..


ಹಿಂದಿನ ಬೆಂಚಿನಿಂದ..."@#%&*()*&$@!$^&"
ಯಾರಪ್ಪ ಅದು ಪ್ರಶ್ನೆ ಕೇಳೋರು? ಈ ಮನುಷ್ಯನಿಗೆ ಕೋಪ ಬೇರೆ ಬರುತ್ತಿದೆ. ಕತ್ತಲಾಗುತ್ತಿದ್ದ ಹಾಗೆ ಕಣ್ಣೂ ಕಾಣುವುದಿಲ್ಲವಂತೆ. ಪಂಪನಲ್ಲಿರುವ ಸಿಟ್ಟಿನಬಗ್ಗೆ ಮಾತನಾಡುತ್ತಿದ್ದಾನೆ. ಓಹೋ! ಬಂತು ಬಂತು ಮೈ ಮೇಲೆ ದೇವರು ಬಂತು. ಧಡ್! ಪೋಡಿಯಮ್ಮಿನ ಮೇಲೆ ಕುಟ್ಟಿದ ಜೋರಿಗೆ ಮೊದಲನೇ ಬೆಂಚಿನಲ್ಲೇ ನಿದ್ದೆ ಮಾಡುತ್ತಿದ್ದ ಹುಡುಗಿ ಎದ್ದು ಕೂತಳು. ಉದ್ದೇಶವೂ ಅದೇ ಆಗಿತ್ತೋ ಏನೋ? ಹಿಹಿಹಿ... ಬೆಳಕು ಚೆನ್ನಾಗಿದ್ದಾಗ ನಡೆಯುತ್ತಿದ್ದಷ್ಟು ವೇಗವಾಗಿ ಪಾಠ ಈಗ ನಡೆಯುತ್ತಿಲ್ಲ. ಏನು ಹೇಳಬೇಕೆಂದು ಗೊತ್ತಾಗಿತ್ತಿಲ್ಲವೋ ಏನೋ, ೩ ಸೆಕೆಂಡಿಗೆ ಒಂದು ಪದ ಹೊರಕ್ಕೆ ಬರುತ್ತಿದೆ. ... ಈಗ ಪಂಪ ತನ್ನ ರಾಜನ ಮೇಲೆ ಯಾಕೆ ಬರೆಯಬೇಕಾಗಿತ್ತು ಎಂದು ಚರ್ಚೆ. ಈತ ಸಾಹಿತ್ಯವನ್ನು ಓದುವ ಬದಲು ಮಾರ್ಕ್ಸ್ ವಾದವನ್ನೋ,ಕಮ್ಯುನಿಸಮ್ಮನ್ನೋ ಓದಿಕೊಂಡಿದ್ದರೆ ಚೆನ್ನಾಗಿತ್ತು. ಪಂಪ ಕರ್ಣನ ಕಡೆಗಾದರೆ ರನ್ನ ಅರ್ಜುನನ ಕಡೆಗಂತೆ. ಇವರಿಬ್ಬರೂ ಸೇರಿ ತಮ್ಮ ಕಾವ್ಯಗಳಲ್ಲಿ ಪ್ರಭುತ್ವವನ್ನು ಮಣಿಸಲು ಪ್ರಯತ್ನಿಸಿದ್ದರಂತೆ.

ಸೊಳ್ಳೆ ಕಚ್ಚುತ್ತಿದೆ. ಹೇಳಿ-ಕೇಳಿ ಬೆಂಗಳೂರಿನ ಜ್ನಾನಭಾರತಿಯಲ್ಲಿ ಕ್ಲಾಸು. ಕುಂಟುಮಿಡತೆ ಕುಟುರ್ ಗುಟ್ಟುತ್ತಿದೆ.

ಏನೇನು ಆತನಿಗೆ ಗೊತ್ತಾಗುವುದಿಲ್ಲವೋ ಅದನ್ನು ನಾವು ಗಮನಿಸಿಕೊಳ್ಳಬೇಕು. ರನ್ನ, ದುರ್ಯೋಧನರಿಬ್ಬರೂ ಯುದ್ಧಕ್ಕೆ ಹೋದರಂತೆ. ರಾಮ - ಲಕ್ಷ್ಮಣರಿಬ್ಬರೂ ಕಾಡಿನಲ್ಲಿ ಒಬ್ಬ ಹೆಣ್ಣಿನ ಮೇಲೆ ಹಲ್ಲೆ ಮಾಡಿದರಂತೆ. ರಾವಣ ಏಕಪತ್ನೀವ್ರತಸ್ಥನಂತೆ. ಆದ್ದರಿಂದ, ಅವನು ಸೀತೆಯನ್ನು ಕರೆದುಕೊಂಡು ಹೋಗಿ ಮಂಡೋದರಿಗೆ ಒಪ್ಪಿಸಿದನಂತೆ. ಈ ಎಲ್ಲದರಿಂದ ೧೦ನೇ ಶತಮಾನದ ಕವಿಗಳು ಜನರನ್ನು ಹೊಸ ಆಲೋಚನೆಯ ಕಡೆ ಎಳೆದುಕೊಂಡು ಹೋದರಂತೆ. ಇದೆಲ್ಲವೂ ಯಾವ ಯುಗದ ರೂಪುರೇಷೆಯೋ ಕಾಣೆ?

...ನಮಗೆ ೧೦ನೇ ಶತಮಾನ ಹೊಸ ಪಾಠವನ್ನು ಕಲಿಸಿಕೊಟ್ಟಿದ್ದನ್ನು ಮರೆಯಬಾರ್ದು! ಇನ್ನೇನೋ ಒಂದಷ್ಟು ವಡ.. ವಡ.. ವಡ.. ಇದ್ಯಾವುದನ್ನೂ ನಾವು ಮಾರೀಬಾರ್ದು. ೧ ಗಂಟೆಕಾಲದಿಂದ ಬರೆಯಿತ್ತಿದ್ದೇನೆ. ಆದರೆ, ಬರೆಯುವುದಕ್ಕಾಗಿದ್ದು ನಾಲ್ಕೇ ಪೇಜು. ಇದೇ ನನ್ನ ಎಕ್ಸಾಮಿನ ಸ್ಪೀಡಾದರೆ ಏನಪ್ಪಾ ಎಂದು ಭಯ ಆಗ್ತಿದೆ. ವಡ್ಡಾರಾಧನೆಯ ರೂಪುರೇಷೆಯ ಬಗ್ಗೆ ಈಗ ಡಿಸ್ಕಷನ್. ನಾಯಂಡಹಳ್ಳಿಯಲ್ಲೇ ಪ್ರಿಂಟಾಗಿದ್ದರೂ ಮೇಡಿನ್ ಚೈನಾ ಅಂತ ಲೇಬಲ್ ಅಂಟಿಸಿದ್ದರೆ ನಾವು ಅದನ್ನು ಕೊಳ್ಳುತ್ತೇವೆ. ಹಾಗೆಯೇ, ಸಣ್ಣಕಥೆಗಳು ನಮ್ಮಲ್ಲಿಯೇ ಇದ್ದರೂ, ಅವು ಇಂಗ್ಲೀಷಿನಿಂದ್ ಎಂದು ಹೇಳುವ ಹುಚ್ಚು ನಮಗೆ! ಇದು ವಡ್ಡಾರಾಧನೆಯ ರೂಪುರೇಷೆ. ಅತ್ತಿಮಬ್ಬೆ ಪ್ರಿಂಟೇ ಇಲ್ಲದ ಕಾಲದಲ್ಲಿ ಸಾವಿರ ಪ್ರತಿಗಳನ್ನು ಮಾಡಿ ಹಂಚಿದಳಂತೆ.

ಹಿಂದಿನ ಬೆಂಚಿನಿಂದ ರಿಕ್ವೆಸ್ಟು! "ಸಾರ್, ಕತ್ತಲಾಗುತ್ತಿದೆ ಬರೆದುಕೊಳ್ಳುವುದಕ್ಕೆ ಆಗಿತ್ತಿಲ್ಲ. ನಾಳೆ ಕಂಟಿನ್ಯೂ ಮಾಡಿ." ಹೊರಗಡೆ ಕತ್ತಲು ಕವಿಯುತ್ತಿದೆ. ತನ್ನ ಕಣ್ಣುಗುಡ್ಡೆಗಳವರೆಗೂ ಗಡಿಯಾರ ತಂದುಕೊಂಡು ನೋಡಿದ ಮಹಾಶಯ "ಇನ್ನೂ ಐದೂವರೇಏಏಏಏಏ...." "ಇಲ್ಲಾ ಸಾರ್... ಆರೂವರೇಏಏಏಏಏ", ಯಾವುದೋ ಹೆಣ್ಣು ಧ್ವನಿ "ಲೇಟಾಯ್ತು ಬಿಡಿ ಸಾರ್...", "...ನನಗೇನೂ ತೊಂದರೆ ಇಲ್ಲಪ್ಪ, ಆದರೆ ಇವತ್ತು ಹೇಳಿಬೇಕಾಗಿದ್ದನ್ನ ಇನ್ಯಾವತ್ತೂ ಹೇಳೋದಿಲ್ಲಪ್ಪ....". ಇನ್ಯಾವುದೋ ಧ್ವನಿ " ಇಲ್ಲ್ಲ, ಇಲ್ಲ, ನೀವು ಹೇಳಿ ಸಾರ್, ..." ಮೆತ್ತಗೆ.. "ಹೋಗ್ಲಿ ಬಿಡ್ರಪ್ಪ ಕ್ಲಾಸಾದ್ರೂ ಮುಗಿಲೀ...." ಆ ಮಹಾಶಯ "ಆಗ್ಲೀ ಇರ್ರವ್ವ .... ನನಗೆ ಕಣ್ಣೇ ಕಾಣುತ್ತಿಲ್ಲ ಆದರೂ ಪೇಪರೂ ಹುಡುಕುತ್ತಿಲ್ಲವಾ....?

ಓಹೋ! ಅಂತೂ ಇಂತೂ ಪೇಪರು ಸಿಕ್ಕಿತು. ಆದರೇನು ಫಲ ಪೂರ್ತಿ ಕತ್ತಲು. ಕಣ್ಣೇ ಕಾಣುತ್ತಿಲ್ಲ ಕಿಟಕಿಯ ಪಕ್ಕ ನಿಂತುಕೊಂಡರೂ.. ಬರೇ ಕತ್ತಲೆ ಬಂದು ಪೇಪರಿಗೆ ರಾಚುತಿತ್ತು. ಆ ಮನುಷ್ಯನಿಗೆ ಭಾರಿ ಖುಶಿಯಾಗಿರಬೇಕು. ಯಾರು ಏನು ಮಾಡುತ್ತಿದಾರೋ ಯಾರಿಗೂ ಕಾಣುತ್ತಿಲ್ಲ. ಕರೆಂಟು ಹೋದರೆ ಅದಕ್ಕೆ ಬದಲಿ ವ್ಯವಸ್ಥೆ ಮಾಡಬೇಕೆಂದು ಕೂಡ ತಿಳಿಯಲಿಲ್ಲವೇ?

ಈಗ ಗೊತ್ತಾಗುತ್ತಿದೆ ಯಾಕೆ ವಿನಯಾ ನಮ್ಮದು ಕಾಡು ಕ್ಯಾಂಪಸ್ ಅಂತ ಹೀಗಳೆಯುತ್ತಿದ್ದಳು ಅಂತ.

ಕರೆಂಟು ಬಂತು. ಅಯ್ಯೋ ಇನ್ನೂ ಅರ್ಧ ಘಂಟೆ ಬಿಡುವ ಹಾಗೆ ಕಾಣುವುದಿಲ್ಲ, ಈ ಮನುಷ್ಯ. ಹೋ... ಈಗ ನನಗೆ ಡೇಂಜರು ಕಾಣುತ್ತಿದೆ. ನಾನು ಬಹಳ ಬರಕೋತಾ ಇದ್ದಿನಿ ಅಂತ ಈಯಪ್ಪ ನನ್ನನ್ನೇ ನೋಡುತ್ತಿದ್ದಾನೆ. ನಾಳೆಯಿಂದ ಈಯಪ್ಪನ ಕ್ಲಾಸನ್ನು ನಾನು ಅಟೆಂಡು ಮಾಡುವುದಿಲ್ಲ.

.... ಎಲ್ಲಾ ರಗಳೆಗಳಲ್ಲೂ ಶಿವನೇ ಕೆಳಗೆ ಬಂದು ಭಕ್ತರನ್ನು ಪುಷ್ಪಕವಿಮಾನದಲ್ಲಿ ಕರೆದುಕೊಂಡು ಹೋಗುತ್ತಾನಂತೆ. ದ್ರಾಕ್ಷಿ ಹುಳಿ ಎಂದ ನರಿಗಿಂತ ಬಾಹುಬಲಿ ದೊಡ್ಡವನಂತೆ. ಎಂಥಾ ಹೋಲಿಕೆ. ಯಾವುದನ್ನೋ ಮುಂದಿನ ತರಗತಿಯಲಿ ಹೇಳಬೇಕಾಗಿರುವುದರಿಂದ ಇದನ್ನು ಇಲ್ಲಿಗೆ ಮೊಟಕುಗೊಳಿಸುತ್ತಿದ್ದಾರಂತೆ. ಏಳು ಗಂಟೆ... ಇನ್ನೂ ಬಿಡುವ ಸಮಯವಾಯಿತು .... "ಇನ್ನು ೨೫ ನಿಮಿಷದಲ್ಲಿ ಮುಗಿಸಿಕೊಟ್ಟುಬಿಡುತ್ತೇನೆ ನಿಮಗೆ".. ಹಾಆಆಆಆಆಆಆಆಆ! ಲೇಟಾಯ್ತು ಸಾರ್........!" "ಲೇಟು ಆಗೋ ಹಾಗಿದ್ರೆ ಹೊರಡ್ರಪ್ಪ." ಅರ್ಧ ಕ್ಲಾಸು ಎದ್ದು ಹೊರಟಿತು. ನಾನು ಬೇರೆ ಈಯಪ್ಪನಿಗೆ ನೇರ ನೇರ ಕೂತಿದ್ದೇನೆ. ಭಾರಿ ಬರಕೋತಾ ಇದ್ದೀನಿ ಅಂತ ನನ್ನನ್ನೇ ಣೊಡುತ್ತಿದ್ದಾರೆ.

ಅಬ್ಬಾ! ಮುಗಿಯಿತು. ಕಿಟಕಿಯಿಂದ ನೇರ ಹುಡುಗಿಯರ ಮುಖಕ್ಕೆ ದಾಳಿ ಮಾಡಿದ ಸೊಳ್ಳೆ, ತಿಗಣೆಗಳ ದೆಸೆಯಿಂದ ಬಿಟ್ಟುಬಿಟ್ಟರು.

ಆದರೆ, ನನ್ನ ಕೈ ತೋರುಬೆರಳ ತುದಿಯಿಂದ ಮೊಣಕೈವರೆಗೆ ನೋಯುತ್ತಿತ್ತು.

ಶುಕ್ರವಾರ, ಏಪ್ರಿಲ್ 11, 2008

ಅವಳು

ಕಿಟಕಿಯ ಪಕ್ಕ ಕೂತು, ಹಾಗೆ ಸ್ವಲ್ಪ ಎಡಕ್ಕೆ ಬಾಗಿ,ಗಾಜಿಗೆ ತಲೆ ಒರಗಿಸಿ, ತನ್ನ ತೆಳುವಾದ ಓಣಿಯನ್ನು ಕಣ್ಣು - ಕೂದಲು ಮರೆಯಾಗುವಂತೆ ಹೊದ್ದು ಮಲಗಿದ್ದ ಆ ಸುಂದರಿಯನ್ನು ಎಷ್ಟು ನೋಡಿದರೂ ನೋಡಬೇಕೆನಿಸುತಿತ್ತು. ಕಿಟಕಿಯಿಂದ ಬೀಳುತ್ತಿದ್ದ ಬಿಸಿಲು ಅವಳ ಓಣಿಗೂ ಮುಖಕ್ಕೂ ಒಂದು ರೀತಿಯ ಹಿತಮಿತವಾದ ಮೆರುಗು ತಂದಿತ್ತು. ಕೂದಲು ನಮ್ಮಮ್ಮ ಎಣ್ಣೆ ಹಚ್ಚಿ ಬಾಚಿದರೆ ಹೇಗೋ ಹಾಗೆ ಅವಳ ಮಾತು ಕೇಳಿತ್ತು. ಮುಖದ ಮೇಲೆ ಯಾವ ಕಂಪನಿಯ ಯಾವ ಪದಾರ್ಥವೂ ಕಾಣದಿದ್ದುದು, ಯಾವುದೋ ಸ್ವಪ್ನ ಸುಂದರಿಯೆಂಬ ಭ್ರಮೆ ಮೂಡಿಸುತ್ತಿತ್ತು. ಭೂಲೋಕದ ಅರಿವೇ ಇಲ್ಲದಂತೆ ತೋರುತ್ತಿತ್ತು, ನಿದ್ದೆ ಮಾಡುತ್ತಿದ್ದ ಮುಖದ ಭಾವನೆ. ಇಂತಹ ಹುಡುಗಿಯರನ್ನು ನೋಡಿ ಎಷ್ಟು ದಿನವಾಯ್ತಪ್ಪ ಎಂದುಕೊಂಡು ಸುತ್ತ ಕಣ್ಣು ಹರಿಸಿದೆ. ಬರೀ ಪಾಂಡ್ಸು, ಎಲ್ 18, ಲ್ಯಾಕ್ಟೋಕ್ಯಾಲಮೈನ್ಗಳೇ ಕಣ್ಣಿಗೆ ರಾಚಿ ರೆಪ್ಪೆ ಮುಚ್ಚುವಂತಾಯಿತು. ಮತ್ತೆ ಆ ಹುಡುಗಿಯ ಕಡೆಗೆ ಮುಖ ತಿರುಗಿಸಿದೆ, ಸಂತೋಷವಾಯಿತು!

ಟೌನ್ ಹಾಲ್ ಬಸ್ಟಾಪು ಬಂದಿದ್ದೆ ಎಲ್ಲರು ದಡಬಡನೆ ಇಳಿಯತೊಡಗಿದ್ದರು. ಆ ಹುಡುಗಿಯ ಪಕ್ಕದಲ್ಲೆ ಸೀಟು ಸಿಕ್ಕರೆ ಚಂದ ಎಂದುಕೊಂಡೆ,ಸಿಕ್ಕೇಬಿಟ್ಟಿತು! ಗಾಡಿ ಮುಂದಿನ ಸ್ಟಾಪಿನ ಕಡೆಗೆ ಹೋಗತೊಡಗಿದ್ದೆ ತಡ, ಆ ಸುಂದರಿಗೆ ದಿಢೀರನೆ ಎಚ್ಚರವಾಯಿತು. ಹಿಂದಿನ ಜನ್ಮದ ನೆನಪಿನಲ್ಲಿ ಕಳೆದುಹೋಗಿದ್ದ ಹೆಣ್ಣಿಗೆ ಈ ಜನ್ಮದ ನೆನಪು ಮರುಕಳಿಸಿ ಕರ್ತವ್ಯ ಪ್ರಜ್ನೆ (ಕ್ಷಮಿಸಿ ಅಕ್ಷರ ತಪ್ಪಾಗಿದೆ)ಎಚ್ಚೆತ್ತುಗೊಂಡಂತೆ.

ನೋಡುನೋಡುತ್ತಿದ್ದಂತೆ ಅವಳ ವ್ಯಾನಿಟಿ ಬ್ಯಾಗಿನಿಂದ ಒಂದೊಂದೆ ಸಾಮಾನು ಹೊರಗೆ ಬರಲಾರಂಭಿಸಿತು. ಮಾತುಕೇಳಿ ಕೂತಿದ್ದ ಕೂದಲು ಅವಳು ಕೈಬೆರಳಾಡಿಸುತ್ತಿದ್ದಂತೆ ನೆಗರಿ ನಿಂತುಕೊಂಡಿತು.ತುಟಿಗೆ ಕೆಂಪು ಹರಡಿತು.ಮುಖಕ್ಕೂ ಬೂದಿ ಬಳಕೊಂಡಾಯಿತು. ರಿಂಗಣಿಸಿದ ಫೋನನ್ನು ತೆಗೆದು ಉತ್ತರಿಸಿದಳು - "ಯಾ, ಯಾ ,ಐ ಯಾಮ್ ಗೆಟಿಂಗ್ ಡೌನ್ ಆರ್ ಯು ದೇರ್? ಓಕೆ ದೆನ್". ತನ್ನ ತೆಳು ದುಪ್ಪಟ್ಟಾವನ್ನು ಮಡಚಿ ಬ್ಯಾಗಲ್ಲಿರಿಸಿ,ಚಿಕ್ಕ ಟಾಪನ್ನು ಸರಿ ಮಾಡಿಕೊಂಡು ಕೆಳಕ್ಕಿಳಿದಳು. ನಾನು ಅವಾಕ್ಕದೆ.......

ರಸ್ತೆಯಲ್ಲಿ

ಬಿರಬಿರನೆ ನಡೆಯುತ್ತಿದ್ದ ನನಗೆ
ಅವನು ಹಿಂದೆಬರುತ್ತಿದ್ದುದು ತಿಳಿದು
ಕಾಲೆಳೆಯಿತು......

ನನ್ನ ಕಂಡೋ ಏನೋ ಅವಗೆ
ಕಣ್ಣು ನೆಟ್ಟು, ರಭಸ ಇಳಿದು,
ನಿಧಾನ ನಡೆಯಿತು......

ಇಬ್ಬರೂ ಒಟ್ಟಿಗೆ ಹೊರಟೆವು
ದಾರಿ ಸಾಗಿತು
ಗುರಿತಲುಪಿತು
ಆದರೆ, ವಿಪರ್ಯಾಸ
ಆಟೋದಿಂದ ಇಳಿವಾಗ ಚಿಲ್ಲರೆಗಾಗಿ
ಜಗಳವಾಡಬೇಕಾಯಿತು!!!!!!

[:)]

ಭಾನುವಾರ, ಏಪ್ರಿಲ್ 6, 2008

ನನ್ನ ಇಂಟರ್ವ್ಯೂ ಗೆಲ್ಲಿಸಿದ ಕೃತಿ

ಐದನೇ ಕ್ಲಾಸಿಗೆ ಪ್ರಥಮ ಚಿಕಿತ್ಸೆ ಕೊಡುವ ಬಗ್ಗೆ ಅರಿವು ಮೂಡಿಸುವ ಬಗ್ಗೆ ನನ್ನ ಪ್ರಶ್ನೆ ಇದ್ದದ್ದು.

SCENE – 1


(Children are playing in a vacant space surrounded by houses. they are playing hide and seek. There is a small fire at one end, which children do not notice.)

Ch. 1: all of you go hide youself.1…2…3…4….5…………… 10………15……..20…..
(Everyone find his or her place to hide)

Geetha :( holding a child by his hand) come fast chintu. You will be caught,
definitely. (Drags him behind a tree).

Ch.1: 49….50. Where are you people? (turns around and searches for his mates.
discovers Chintu’s hand behind the tree) (shouting) chintu….chintu... Chintu is the
cheater .. Chintu is the cheater.

Chintu: You always catch me first. You are all cheaters. I will never play with you again. (Relieves himself from Geetha and stands his head fallen).

Ch.1: You always have an excuse or the other. I am not going to do it again. You are bound to accept this.

Chintu: I told you, I will never play with you. Here I go (runs out of the group towards fire. Suddenly stops before the fire and tries to pick up a burning thing). Ouch.. it’s hot.( starts crying loudly).

Sunitha: Oh! He burnt his hand. Let us go and help him. (They all move towards Chintu).

Children: Stop it chintu. Do not worry. You will be all right.

Sunitha: (to self) I think it is a first degree burn. (Loudly) All of you be here. I will be back in a moment.
(Rushes out and is back in a moment with a box and water)
Chintu show your hand. (Examining his hand). I knew it is a first-degree burn. I will set it right. (Cleanses the wound with water, wipes it gently with a clean cloth and covers the wound with a plastic bandage.)

Chintu: (smiling) that is very nice. I do not feel any burning now. (Gets up in excitement and is again to fall down)

Children: (cry) Chintu……
(He manages to stand straight. All of them start laughing and return to their homes)








SCENE – 2

[Sunitha’s home. She is watching “Tom & Jerry”. The doorbell rings and she opens the door standing on a sofa handle. She is indifferent but at once shouts at him]
Sunitha: Papa! Why are you late? You never keep your words, do
you? [Yells at her father]. Have you brought the chocolates?
[Starts checking his pockets]

Papa: OK, OK, Okay….baby. [Takes out a chocolate and gives it to her)

Sunitha: Yeh! That’s what I want [Tries to jump off the sofa and falls down].

Papa: [lifting her up] Oh Oh, Don’t get excited, have it leisurely.

[Sunitha’s mother comes out of kitchen with a vessel in one hand and a cotton cloth in another]

Mother: (shouting) Sunitha! I knew you would do this. (Checks out if there is any wound,
finds out a scratch in her knee). There you have it. Come with me (Drags her inside
and comes back after a minute). (Loudly to ‘Papa’) get fresh, had anything at
office? Come fast, have your lunch.

Sunitha: [In her usual excitement] Mama! You know everything. Sudha Madam said the
same thing yesterday. (As if by hearted) “A wound or scratch should be washed
first, gently wipe it with cotton and then cover it with a protective bandage.”

Mother: OK, OK, I got it. [Goes to the kitchen and arranges dining table for dinner]
(Loudly) Now, come, have your lunch.
[Sunitha and Papa come to the table. Mother serves food]

Mother: (to Papa) why are you late?

Papa: You know, there is always one or the other work at my desk when I want to leave.
(Turns to Sunitha) Have you been to your friends’ home today Sunitha?

Mother (intervenes): Yes, she is always ready for anything and everything. (Stares at
her). Ask her what she did there.

Sunitha: Papa, I did what my teacher had told us. I know, “whenever there is a burn, you
should not put cloths on it nor should …..”

Mother: Shut up! Suni. You act as if you have done your MBBS. You are… (Suddenly
stops herself, goes to kitchen with a smile on her lips)

Papa: Sunitha, what did you do there?

Sunitha: No papa, Chintu had a burn. No body knew what to do when he started crying.
I told them to wash it with water and helped to bandage it.

Papa: Oh! How did you know all this?


Sunitha: Of course, I know, Sudha madam has taught all this in our class! Papa, you know, it so happened yesterday in the class…

SCENE-3

(Students are moving in a line. A gent teacher is in charge of them)

Madhu (A naughty girl): (whispers in her friends ears)
Chuk-buk, chuk-buk
Train is moving,
chuk-buk, chuk-buk
Train is going.

Teacher: Madhu! What is that? (Madhu gently moves in the line)

(They come to ground; children disperse and start playing in groups. Some are playing kho-kho, some play skipping. Madhu and group that include Sunitha are in a corner, debating what they should play.)

Geetha: Let us sit and play word building.

Veena: What? word building! You always suggest such boring things.

Geetha: Why do you say that? Mani madam told us that it improves our General
Knowledge.

Veena: No, you always want to sit (hits on her nose)
(Geetha is hurt but she hides it from her friends)
Madhu: OK, OK. Geetha! We will not sit. Let us do something new. (Starts thinking with a
finger on her cheek)

Sunitha: We will have a war and sort of things. It’s very interesting. (Starts acting as if she
has a gun and bombs). yaaaaa…… disha.. disha..disha…dhamaaaaaaar….(with
her hands in air and hitting her friends some times.)

Madhu: Stop it Sunitha! I have an idea. We will make a pyramid. Now, Geetha and you
kneel down and bend to ground. Sunitha give me support [the girls reluctantly do
so. Madhu holds her hand, climbs on the girls with one leg on each of them]. Yeh!
it’s done. Leave your hands (stumbles) [Veena- Not knowing what she should
actually do, lifts her back to adjust her position]
No, No (falls down with a loud cry)

[All the three suffer minor wounds, with Geetha holding her bleeding nose. Teacher (Sudha), comes running with some students]

Teacher: Madhu! You are again at it?

Madhu: No. Madam, we were just trying something new. They gave an idea and …

Veena: No madam, she gave the idea. She made us crouch.

Teacher: Enough of it! Rohit go get the First Aid box and some water (he runs). Geetha
your nose is bleeding stand upright still it stops. (Makes Geetha stand upright to
stop the flow of blood. Rohit is back at once) Children, do not cover them. Come
to a side. (Students do so) (She gives first aid to all the three)

Teacher: That’s over. Kiran, you did the right thing. It is always important to inform
immediately to your parents, teachers or elders whenever you have a situation
like this.

Priya: Please show us what all is there in the first aid box madam. It looks very interesting.

Teacher: Allright. It is important for you to know. What’s in the box and what we use them
for. See here, there are some plastic bandages, some cotton, Antiseptic towelettes
Anteptic Ointment, Instant ice pack, Burn gel to treat burns, Pain reliever and
some Glucose.

Kiran: Should we use all these things to give first aid?

A boy: Oh! You will never stop giving first aid then. When will the patient get second aid?

Teacher: No, Kiran. You will make use of certain of the things for certain injuries.

B boy: How do we know what medicines should be used, madam?

Teacher: I will tell you. The most common thing you come across is a wound or a scratch
bleeding. You should stop the bleeding by applying pressure using a clean cloth.
Wash wound with mild soap and water and remove any dirt. Cover the wound
with a protective bandage(Shows cloth and bandages in the box).
A boy: That is so easy!

Teac: No, it is easy only when the bleeding stops. If not, you should immediately consult
your doctor.

Rohit: What are we supposed to do when there is a burn?

Teac: You will come across burns more frequently, right? (Children nod in agreement)
I will tell you a few simple things to identify the degree of burns and to give it aid.
If only the first layer of the skin is burnt or the second layer is burnt and the burn is
no larger than two or three inches, Run cool water over the burn for a few minutes.
Cover the burn with a sterile bandage or a clean cloth. You may also take aspirinor
Acetaminophen to relieve any swelling or pain.

Madhu: Madam, you did not any of these things to Geetha. Is what you did to her also a first aid?

Teac: Definitely, Madhu. Whenever there is a Nosebleed, you can either sit or stand upright to slow the flow of blood or Pinch your nose with your thumb and forefinger for 10 minutes while breathing through your mouth.
Sunitha: that is very interesting. Can we try this at home, Madam?
Teac: Yes, you can. However, you should be very careful while doing it. (School bell rings)
Students: Thank you teacher, bye teacher. (Disperse)

[Back at home]
Sunitha: this is how I know papa.

Papa: Good Sunitha. You have done a good job. However, always remember you should be very careful and immediately inform your elders at any such situation.

- END-

ಶುಕ್ರವಾರ, ಮಾರ್ಚ್ 7, 2008

ಜೀವನ ಮತ್ತು ನಾನು

ಬೆಮನಸಾ ಬಸ್ಸಿನಲ್ಲಿ ಡ್ರೈವರ್ರನ ಹಿಂದುಗಡೆ ಸೀಟಿನಲ್ಲಿ, ಡ್ರೈವರ್ರಿಗೆ ಬೆನ್ನು ಮಾಡಿ, ನನ್ನ ಸಹಪ್ರಯಾಣಿಕರಿಗೆ ಮುಖ ಮಾಡಿಕೊಂಡು ಕೂತಿದ್ದೆ.
ಇದ್ದಕಿದ್ದ ಹಾಗೆ ಏನೋ ಹೊಳೆದಂತಾಯಿತು ............

ಎಷ್ಟೆಷ್ಟು ತರದ ಜನ... ಒಂದು ಕ್ಷಣ ನಮ್ಮನ್ನು ನೋಡಿ, ಏನೋ ನಗುವಂತೆ ಮಾಡಿ, ನೋಡಿಯೂ ನೋಡದಂತೆ ಪಕ್ಕಕ್ಕೆ ತಿರುಗಿ, ನನ್ನ ಮುಖದಲ್ಲಿ ಎಂಥದ್ದೋ ವಿಸ್ಮಯವೊಂದನ್ನು ಕಂಡು ಮುಸಿ ಮುಸಿ ನಕ್ಕು, ಸಮಾಧಾನವಾಗದಂಥಹ ಇನ್ನೇನೋ ಒಂದನ್ನು ಕಂಡು ಬೇಸರದ ನಿಟ್ಟುಸಿರು ಬಿಟ್ಟು, ಕಡೆಗೆ ಅಲ್ಲೊಬ್ಬಳು ಕುಳಿತಿದ್ದಳು, ತಮ್ಮ ದೃಷ್ಟಿ ಅವಳ ಮೇಲೆ ಬಿದ್ದಿತ್ತು ಎಂಬ ನೆನಪಿನ ಲವಲೇಶವನ್ನೂ ತಲೆಯಲ್ಲಿ ಉಳಿಸಿಕೊಳ್ಳುವ ಗೋಜಿಗೆ ಹೋಗದೆ ಸರಸರನೆ ಇಳಿದು ತಮ್ಮ ದಾರಿ ತಾವು ನೋಡಿಕೊಂಡು ಹೋಗುವ ಪ್ರಾಯಾಣಿಕರು. ನಾನು ಹಾಗೆ ಕೂತಿಲ್ಲದಿದ್ದರೆ ಇದೆಲ್ಲ ನನಗೆ ಗೊತ್ತಾಗುತ್ತಲೇ ಇರಲಿಲ್ಲ!

ಜೀವನದಲ್ಲಿಯೂ ಹಾಗೆ ತಾನೆ? ನಮ್ಮ ಅರವತ್ತೋ - ನೂರೋ ವರುಷದ ಆಯಸ್ಸಿನಲ್ಲಿ ಒಟ್ಟಿಗೆ ಇರುವುದು, ಮಾತಾಡುವುದು ಕಡೆಗೆ ಒಟ್ಟಿಗೆ ಕೂತು ಉಣ್ಣುವುದು ಕೇವಲ ಕೆಲವೇ ಘಂಟೆಗಳ ಹರವಿನಲ್ಲಿ. ಯಾರಾದರೂ ನಮ್ಮ ಮುಂದೆ ಇಲ್ಲದಿದ್ದಾಗ ಅವರ ವಿಷಯದಲ್ಲಿ ತೆಗೆದುಕೊಳ್ಳುವ ಸಲಿಗೆಯನ್ನು, ಅವರು ಇದ್ದಾಗ ತೆಗೆದುಕೊಳ್ಳುವುದಿಲ್ಲ.

ಹೇಳಿದ್ದು, ಮಾಡಿದ್ದು, ಕೊಟ್ಟದ್ದು, ತೆಗೆದುಕೊಂಡದ್ದು ಎಲ್ಲವನ್ನೂ ಮರೆತು, ಮುಂದೆ ಮಾತ್ರ ನೋಡಿಕೊಂಡು ಹೋಗುವುದು ಜೀವನದ ಜಾಯಮಾನ. ಆದರೆ, ನಾನು ಕೂತಿದ್ದ ಸ್ಥಾನ ಹಾಗೆ ಇರಲಿಲ್ಲ. ಡ್ರೈವರ್ ಸಾಹೇಬನು ಯಾವಾಗ ಎಲ್ಲಿ ತಿರುವುತ್ತಾನೆ, ಎಲ್ಲಿ ಬ್ರೇಕ್ ಹಾಕುತ್ತಾನೆ, ಎಲ್ಲಿ ಜೋರಾಗಿ ಓಡಿಸುತ್ತಾನೆ ಎಂಬುದೊಂದೂ ತಿಳಿಯುತ್ತಿರಲಿಲ್ಲ. ಕಂಡಕ್ಟರ್ ಸಾಹೇಬ ತನ್ನ ವಿಶಿಷ್ಟ ಚಿತ್ರಗುಪ್ತನ ಶೈಲಿಯಲ್ಲಿ ಬಂದವರ, ಹೋದವರ, ಹತ್ತಿದ್ದವರ, ಇಳಿದವರ ಲೆಕ್ಕವನ್ನು ಇಡುತ್ತಿದ್ದ.

ಅಂಗಡಿಗಳು, ಹರಿಯುತ್ತಿದ್ದ ಮೋರಿ ಕೆರೆಗಳು, ಡ್ರೈವರ್ ಹಾಕಿದ್ದ ಹಾಡು, ಹತ್ತಿ ಇಳಿದವರ ನೆನಪು, ದೊಡ್ಡ ಆಲದ ಮರ, ಫುಟ್ಪಾತಿನಲ್ಲಿ ಜಗಳಾಡುತ್ತಿದ್ದ ಗಂಡಹೆಂಡತಿ, ಜನಜಂಗುಳಿ ತುಂಬಿದ ಬಸ್ಟಾಪುಗಳು, ಇವುಗಳನ್ನು ನೆನಪಿಸಿಕೊಳ್ಳುತ್ತಾ ಕೂತಿದ್ದೆ. ಅದರ ಬಗ್ಗೆಯೆಲ್ಲ ಆಲೋಚಿಸುತ್ತಿದ್ದೆ ಎನ್ನಬಹುದಾದರೂ ಅದರ ಮುಂದಕ್ಕೆ ಏನು ಹೇಳಬೇಕೆಂದು ನನಗೆ ತಿಳಿಯಲಾರದು.

ಹೀಗೆ, ನನ್ನ ಸ್ಟಾಪು ಬಂದೇ ಬಿಟ್ಟಿತ್ತು. ಎಲ್ಲರೂ ಇಳಿದ ಮೇಲೆ ಸಾವಕಾಶವಾಗಿ ಎದ್ದು,"ಸ್ಟಾಪು ಬರುವುದಕ್ಕೆ ಮುಂಚೆಯೇ ಏಳಬಾರದೇನ್ರೀ?" ಎಂದು ಡ್ರೈವರ್ರನ ಹತ್ತಿರ ಬೈಸಿಕೊಂಡು ಇಳಿದೆ.

ಏದುಸಿರು ಬಿಡುತ್ತಾ, ಮುಂದಾರಿಯನ್ನೇ ಎದುರು ನೋಡುತ್ತಾ, ಕಾದು ಕಾದು ತಲುಪಿದ್ದ, ಸುಸ್ತಾಗಿದ್ದ ಅವರೆಲ್ಲರಿಗಿಂತ ನಾನು ಸಂತುಷ್ಟಳಾಗಿದ್ದೆ.

ಶನಿವಾರ, ಫೆಬ್ರವರಿ 9, 2008

ಹೈ

ಹೈ ಎಲ್ಲರಿಗೂ

ಎಲ್ಲರಿಗೂ ನಮಸ್ಕಾರ

ಹೈ ನಾನು ಹೇಮ, ಈಗ ತಾನೆ ಶುರು ಮಾಡ್ತಿದ್ದೀನಿ ಬ್ಲಾಗಾಟ. ಯಾವ ವಿಷಯದ ಬಗ್ಗೆ ಬರೆಯೋದು ಅಂತ ಸ್ವಲ್ಪ ಕನ್ಫ್ಯೂಷನ್ .......

ಹಾ ಒಂದ್ನಿಮಿಷ ಅದೆನೋ ಪೋಸ್ಟು ಮಾಡೋದಂತೆ ಮಾಡಿನೋಡ್ತೀಣಿ ಇರಿ. ಕಾಣಿಸ್ತಿದೆಯೆ ನಿಮಗೆ?