ಬುಧವಾರ, ಜುಲೈ 29, 2009

ರುಕ್ಮಿಣಿಯ ಅಜ್ಜಿ ಮನೆ - ೭

ರುಕ್ಮಿಣಿ ಊರ ಹೊಲ ತೋಟಗಳನ್ನೆಲ್ಲಾ ದಾಟಿ ಅಜ್ಜಿ ಮನೆಯ ಬೀದಿಗೆ ಬಂದಳು. ಅಯ್ಯೋ! ಹಳೇ ಮನೆಯ ಬೀದಿಗೆ ಬಂದುಬಿಟ್ಟಿದ್ದಳು. ಖಾಲಿ ಜಾಗವನ್ನು ನೋಡಿ ಒಂದು ಕ್ಷಣ ಅವಳ ಎದೆ ಧಸಕ್ ಎಂದರೂ, ಒಮ್ಮೆಗೇ ಅವಳ ಬುದ್ಧಿ ಕೆಲಸಮಾಡಿ, ಹೊಸಮನೆ ಆಗಿದೆಯೆಂಬುದನ್ನು ನೆನಪು ಮಾಡಿಕೊಟ್ಟಿತು. ಸರಿ, ಅಲ್ಲಿಂದ ಹೊಸಮನೆಯ ಕಡೆಗೆ ಹೆಜ್ಜೆ ಹಾಕತೊಡಗಿದಳು. ಇಷ್ಟೆಲ್ಲಾ ಆದರೂ ಇನ್ನೂ ರುಕ್ಮಿಣಿಯ ಮನಸ್ಸಿಗೆ ತೃಪ್ತಿಯಾಗಲಿಲ್ಲ. ಅವಳ ಕಣ್ಣು ಮನಸ್ಸು ಬೇರೆ ಏನನ್ನೋ ಹುಡುಕುತ್ತಿತ್ತು.

ಹಾದು ಬಂದ ಹೊಲಗಳೆಲ್ಲಾ ಬಾಯಿ ಬಿಟ್ಟುಕೊಂಡು ಬಿಕೋ ಎನ್ನುತ್ತಿತ್ತು. ಅಲ್ಲಿ ಇಲ್ಲಿ ಎರಡೆರಡು ಸಾಲು ಫಾರಮ್ ಜೋಳ ಹಾಕಿದ್ದಾರೆ. ಅದೂ ಹಸುವಿನ ಮೇವಿಗೆ. ಅದೇ ಈಗ ಪ್ರಾಫಿಟೆಬಲ್ ಬಿಸಿನೆಸ್ ಅಲ್ಲವೇ? ಪಳ್ಳಿಗರ ಹೊಲವನ್ನು ನೋಡಿಯಂತೂ ರುಕ್ಕೂಗೆ ತಡೆಯಲಾರದಷ್ಟು ನಗು ಬಂದು ಬಿಟ್ಟಿತು. ಅವರ ಬೋರಿನಲ್ಲಿ ದೇವರ ದಯೆಯಿಂದ ನೀರು ಚೆನ್ನಾಗಿ ಬರುತ್ತಿದೆಯಂತೆ, ಅದಕ್ಕೆ ಅವರು ತೋಟದ ತುಂಬಾ ಕೊತ್ತಂಬರಿಸೊಪ್ಪಿನ ಬೆಳೆ ಬೆಳೆಯುತ್ತಿದ್ದಾರೆ! ಕೊತ್ತಂಬರಿಸೊಪ್ಪು ಒಂದು ಬೆಳೆಯೇ? ಬಿದ್ದ ಮಳೆಗೆ ಮೇಲೇಳುತ್ತಿದ್ದ ಕಡ್ಡಿಗಳು.

ತನ್ನ ಹಳೆಯ ದಿನಗಳು ನೆನಪಿಗೆ ಬಂದವು ಅವಳಿಗೆ. ಒಂದು ದಿನ ಮಧ್ಯಾಹ್ನ ಅಜ್ಜಿ ಮಾಡಿಕೊಡುತ್ತಿದ್ದ ಮಣಿಪಾಯಸಕ್ಕಾಗಿ ಕಾದುಕೊಂಡು ಅಡಿಗೆಮನೆಯಲ್ಲಿ ಕೂತಿದ್ದಳು. ಮನೆಯಲ್ಲಿ ಯಾರು ಇಲ್ಲದ್ದನ್ನು ಖಾತರಿ ಮಾಡಿಕೊಂಡು ಅಜ್ಜಿ ತನ್ನ ಸೆರಗಿನಲ್ಲಿ ಕಟ್ಟಿದ್ದ ದೊಡ್ಡದೊಂದು ನೋಟು ಕೊಟ್ಟರು. "ಇದು ಎಷ್ಟು ರೂಪಾಯಿ ನೋಟು ನೋಡು? ಅಲ್ಲಿ ಚಪ್ಪರದ ಪಕ್ಕ ಇಷ್ಟು ಜಾಗ ಇತ್ತಲ್ಲ, ಅಲ್ಲಿ ಚೆಲ್ಲಿದ್ದೆ ನಾಲ್ಕು ಧನಿಯಾ. ಕಾಯಿ ಕೊಂಡುಕ್ಕೊಳ್ಳಕ್ಕೆ ಬಂದಿದ್ನಲ್ಲಾ ಸಾಹೇಬ, ಅಜ್ಜಿ ಈ ನೋಟು ನಿನ್ನ ಕೊತ್ತಂಬರಿ ಸೊಪ್ಪಿಗೆ ಅಂದ್ನೇ. ಕಿತ್ಕೊಂಡು ಹೋದ್ರು, ಒಂದಷ್ಟು ಸೊಪ್ಪು" ಎಂದು ಉಸಿರು ನಿಲ್ಲಿಸದೇ ಹೇಳಿದರು. ರುಕ್ಕೂಗೆ ಏನು ಹೇಳಬೇಕೋ ತಿಳಿಯಲಿಲ್ಲ. ಮೆತ್ತಗೆ "ಅಜ್ಜಿ ಇದು ನೂರು ರೂಪಾಯಿ ನೋಟು" ಎಂದಿದ್ದಳು. ಅಷ್ಟಕ್ಕೇ ಅಜ್ಜಿ ಚೇಳು ಕಡಿದವರಂತೆ "ಹೌದೇನೆ, ತಗೊಂಡೋಗಿ ನಿಮ್ಮ ತಾತನಿಗೆ ಕೊಟ್ಟುಬಿಡು ಹೋಗು, ನೂರು ರೂಪಾಯಿಯಲ್ಲಿ ನನಗೇನು ಕೆಲಸ. ಹತ್ತೋ ಇಪ್ಪತ್ತೋ ಆಗಿದ್ದರೆ ನಿನಗೆ ಬಳೆ ತೆಗೆಯುವ ಅಂತಿದ್ದೆ" ಎಂದರು.

ಆವತ್ತಿನ ಆ ನೆನಪಿಗೆ ರುಕ್ಕೂ ತನ್ನಷ್ಟಕ್ಕೆ ತಾನೆ ನಕ್ಕಳು. ಇದೇನು ಹೊಲದ ತುಂಬಾ ಕೊತ್ತಂಬರಿ ಬೆಳೆದಿದ್ದೀರಾ ಎಂದು ಕೇಳಿದ್ದಕ್ಕೆ, ಈಗ ಇದಕ್ಕೇ ತುಂಬಾ ಡಿಮ್ಯಾಂಡು ಎಂಬ ಉತ್ತರ ಬಂತು. ಅದರಲ್ಲಿ ಶಾಲೆಗೆ ಹೋದವನಂತೆ ಕಾಣುತ್ತಿದ್ದ ಈ ತಲೆಮಾರಿನ ಹುಡುಗನೊಬ್ಬ "ಅಕ್ಕ, ನೀವು ಬೆಂಗಳೂರಲ್ಲಿ ಹೋಟೇಲ್ಲಿಗೆ ಹೋಗಿ ದಿನಾ ದಿನಾ ತಿನ್ನಲ್ವೇ? ಎಷ್ಟು ಕೊತ್ತಂಬರಿ ಬೆಳೆದು ಕಳಿಸಿದರೂ ನಿಮ್ಮವರಿಗೆ ಸಾಲದು" ಎಂದನು. ರುಕ್ಕೂಗೆ ಮುಖದ ಮೇಲೆ ಕಬ್ಬಿಣ ಕಾಸಿ ಬರೆ ಎಳೆದಂತಾಯ್ತು. "ಅವರು ಹೊಸ ಹೊಸ ರುಚಿ ತೋರಿಸ್ತಾರೆ, ನಾವು ಹೋಗಿ ಹೋಗಿ ತಿಂತೀವಿ" ಎಂದಂದು ಮುಂದಕ್ಕೆ ನಡೆದುಬಿಟ್ಟಿದ್ದಳು.

ಅಂತೂ ಮನೆಗೆ ಸೇರಿದ ರುಕ್ಕೂ ತಾನು ಅಂದುಕೊಂಡಂತೆ ಎಲ್ಲರಿಗೂ ’ಸರ್ಪ್ರೈಸ್’ ಕೊಟ್ಟಳು. ಆದರೆ, ಅವರಿಗಂತೂ ಅದು ’ಶಾಕ್’ ಆಗಿಹೋಯಿತು. "ಇದೇನಕ್ಕ ಹಾಗೇ ಬಂದುಬಿಡೋದಾ?" ಎಂದು ಅತ್ತೆಯ ದೊಡ್ಡಮಗ ಕೇಳಿದ್ದಕ್ಕೆ, "ಹೋಗೋ, ಹೋಗೋ, ನಮ್ಮಜ್ಜಿ ಮನೆಗೆ ನಾನು ಬರಕ್ಕೆ ನಿನ್ನ ಪರ್ಮಿಷನ್ ಕೇಳಬೇಕಿತ್ತೇನೋ?" ಎಂದು ಜೋರುಮಾಡಿದಳು. "ಅಲ್ಲಾ, ರೋಡಲ್ಲಿಳಿದು ಫೋನು ಮಾಡೀದ್ರೆ ಗಾಡಿ ತರ್ತಿದ್ದೆ?" ಎಂದ ಮುಖ ಸಣ್ಣಗೆ ಮಾಡಿಕೊಂಡು. ತನ್ನ ಹೊಸ ಗಾಡಿಯ ಚಮಕನ್ನು ಬೆಂಗಳೂರಿಂದ ಬರುವ ಅಕ್ಕನಿಗೆ ತೋರಿಸುವ ಅವನ ಆಸೆಗೆ ಮಣ್ಣು ಬಿದ್ದಿತ್ತು. "ಗೊತ್ತು, ಗೊತ್ತು, ಅದಕ್ಕೇ ನಾನು ಫೋನು ಮಾಡ್ಲಿಲ್ಲ. ಏ ಪಳ್ಳಿಗರ ತೋಟ ನೋಡಿದೆನೋ. ಜಬರದಸ್ತಾಗಿ ಕೊತ್ತಂಬರಿಸೊಪ್ಪು ಬೆಳೆದಿದ್ದಾರೆ!" ಎಂದಳು ಕೊಂಕಾಗಿ. ಇವಳ ಕೊಂಕು ಅವನಿಗೆ ಅರ್ಥವಾಯಿತೋ ಇಲ್ಲವೋ? "ಹೌದಕ್ಕ, ಅವರ ಬೋರಲ್ಲಿ ನೀರು ಚೆನ್ನಾಗಿದೆ. ಇದ್ದಿದ್ದರೆ ನಾವು ಬೆಳೀಬೋದಾಗಿತ್ತು". ಇವಳಿಗೆ ಸಿಟ್ಟು ಬಂದು "ಅದು ಸರಿ" ಎಂದಳು. ತಕ್ಷಣ ನೆನಪಿಗೆ ಬಂದು ಬ್ಯಾಗಿಂದ ಉಳಿದಿದ್ದ ಮೂರು ಎಳೇ ಜೋಳಗಳನ್ನು ತೆಗೆದು ಅವನ ಕೈಗಿಟ್ಟಳು. "ಚಿನ್ನಮ್ಮ ಸಿಕ್ಕಿದ್ದಳೋ, ಅವರ ತೋಟದ್ದೇ" ಎಂದಳು. "ಅಜ್ಜಿ ಎಲ್ಲೋ?" ಎಂದು ಕೂಗಿಡುತ್ತಾ, ಅವನ ಉತ್ತರಕ್ಕೂ ಕಾಯದೇ ಹಿತ್ತಲಿಗೇ ಓಡಿದಳು. ಅತ್ತೆ, ಮಾವ ಅವರ ಮಕ್ಕಳು ಇವಳ ಈ ಪರಿಯನ್ನು ಕಂಡು ಮುಖ ಮುಖ ನೋಡಿಕೊಂಡರು.

4 ಕಾಮೆಂಟ್‌ಗಳು:

  1. ಎಲ್ಲಿ ಹೋದಳು ರುಕ್ಮಿಣಿ ಎ೦ದು ಹುಡುಕುತ್ತಿರುವಾಗ ನೆನೆದವರ ಮನದಲ್ಲಿ ಎ೦ಬ೦ತೆ ಪ್ರತ್ಯಕ್ಷ ಆಗಿಬಿಟ್ಟಳಲ್ಲ...!

    ನಾನು ಸಣ್ಣವನಿರುವಾಗ ನಮ್ಮ ಪಕ್ಕದ ಮನೆಯ ಅಜ್ಜಿಯನ್ನು ನೋಡಲು ಅವರ ಮೊಮ್ಮಕ್ಕಳು ಬೆ೦ಗಳೂರಿನಿ೦ದ ಬರುತ್ತಿದ್ದರು. ಆಗೆಲ್ಲಾ ಅವರು ಮಾತನಾಡುತ್ತಿದ್ದ ಇ೦ಗ್ಲಿಷ್, ಬೆ೦ಗಳೂರು ಕನ್ನಡ ಎಲ್ಲವೂ ನಮಗೆ ಆಶ್ಚರ್ಯ ಹುಟ್ಟಿಸುತ್ತಿದ್ದ ವಿಷಯಗಳು. ಅವರನ್ನು ನಾವೆಲ್ಲಾ ವಿಚಿತ್ರ ಜೀವಿಗಳ೦ತೆ ನೋಡುತ್ತಿದ್ದೆವು. ಹೊಲದಲ್ಲಿ ಸಣ್ಣ ಮಕ್ಕಳ೦ತೆ ಕುಣಿಯುತ್ತಿದ್ದ ಅವರನ್ನು ನೋಡಿದಾಗ "ಏನೂ ವಿಚಿತ್ರವಾಗಿ ಆಡುತ್ತವೆ ಇವುಗಳು" ಅ೦ತ ಅನಿಸುತ್ತಿತ್ತು.

    ನಿಮ್ಮ ಕಥೆಯ ಈ ಭಾಗ ನನಗೆ ಅವನ್ನೆಲ್ಲಾ ನೆನಪು ಮಾಡಿತು. ಚೆನ್ನಾಗಿ ಬರೀತಾ ಇದೀರಾ ಕಥೆಯನ್ನು....

    ಪ್ರತ್ಯುತ್ತರಅಳಿಸಿ
  2. kannada font baralendu kaadu kaadu saakaytu... sorry letadaddakke.

    nimma kamentinalli nanna manassige tattida saalu yavudu gotte? 'avarannu naavella vichitra jeevagalante noduttiddevu'!

    ಪ್ರತ್ಯುತ್ತರಅಳಿಸಿ
  3. ಪರವಾಗಿಲ್ಲ ಬಿಡಿ...

    ಆ ವಾಕ್ಯ ಅಷ್ಟು ತಟ್ಟಿತು ಹೇಮಾ ಅವರೇ?

    ಗೀತಾ ಅವರು ಎಲ್ಲಿ ನಾಪತ್ತೆಯಾಗಿ ಬಿಟ್ಟಿದ್ದಾರೆ?

    ಪ್ರತ್ಯುತ್ತರಅಳಿಸಿ