ಬುಧವಾರ, ಮೇ 13, 2009

ರುಕ್ಮಿಣಿಯ ಅಜ್ಜಿ ಮನೆ - ೨

ಹೊರಕ್ಕೆ ಓಡಿ ಬಂದವಳೇ ರಾಶಿಯಿಂದ ಹುಲ್ಲನ್ನು ಎಳೆದು ತಂದು ಎಮ್ಮೆಗಳ ಮುಂದಕ್ಕೆ ಹಾಕಿದಳು. ಹಾಗೆ ಅದರೊಟ್ಟಿಗೆ ಮಾತಾಡುತ್ತಾ, ಅದರ ಮೈ ನೇವರಿಸುತ್ತಾ ಕೂತಿದ್ದಳು. ದೊಡ್ಡವಳಾದ ಮೇಲೆ ಬೆಂಗಳೂರಿನಲ್ಲಿ ಎರಡು ಎಮ್ಮೆಗಳನ್ನು ಸಾಕಿದರೆ, ಹಾಲು ತರುವ ತೊಂದರೆಯೇ ಇರುವುದಿಲ್ಲವಲ್ಲ ಎಂದು ಆಗಾಗ ಅವಳು ಆಲೋಚಿಸುತ್ತಿರುತ್ತಾಳೆ. ಇದನ್ನು ತನ್ನ ಅಣ್ಣನ ಬಳಿ ಒಂದು ಸಾರಿ ಹೇಳಿದ್ದಳು. "ಹೌದು ಇಬ್ಬರೂ ಸೇರಿ ಸಾಕೋಣ, ಹಾಗೇ ಡೈರಿಗೂ ಎರಡು ಲೀಟರ್ ಹಾಲು ಹಾಕೋಣ, ಲಾಭ ಬರುತ್ತೆ" ಎಂದು ಅವನು ಹೇಳಬಹುದೆಂದು ಇವಳು ಎಣಿಸಿದ್ದಳು. ಆದರೆ, ಅವನು ಅದನ್ನು ಕೇಳಿದೊಡನೆಯೇ ಜೋರಾಗಿ ನಕ್ಕುಬಿಟ್ಟ, "ಎಮ್ಮೆ ಸಾಕ್ತೀಯೇನೆ, ಎಲ್ಲಿ ಕಟ್ಟಿಹಾಕ್ತೀಯಾ? ಸಗಣಿ ಏನು ಮಾಡ್ತೀಯಾ, ಅಮ್ಮಾ ನೋಡಮ್ಮಾ ಇವಳು ಎಮ್ಮೆ ಸಾಕ್ತಾಳಂತೆ!" ಎಂದು ಅಣಕಿಸಿಬಿಟ್ಟ. ಆವತ್ತು ಅವನು ಮಾಡಿದ ಅವಮಾನಕ್ಕೆ ಸರಿಯಾಗಿ ಪಾಠ ಕಲಿಸಬೇಕು, ಎಮ್ಮೆಗಳನ್ನು ಸಾಕಿ ತೋರಿಸಲೇಬೇಕು ಎಂದು ಯೋಚಿಸುತ್ತಾ ಕೂತಿರುವಾಗಲೇ, ಅಜ್ಜಿ ಸಾಕಮ್ಮನ ಮನೆಯಿಂದ ಹೊರಕ್ಕೆ ಬಂದರು. "ನಡಿಯಮ್ಮೋ, ನಿಮ್ಮ ತಾತನಿಗೆ ಊಟಕ್ಕೆ ಹೊತ್ತಾಯಿತು " ಎಂದು ಹೊರಟರು. ಇವಳು ಅವರ ಹಿಂದೆಯೇ ಮನೆಗೆ ಬಂದಳು.

ಅಜ್ಜಿ ತಾತನಿಗೂ ರುಕ್ಕೂಗೂ ಊಟಬಡಿಸಿ, ತೋಟದಲ್ಲಿದ್ದವರಿಗೆ ಊಟ ತೆಗೆದುಕೊಂಡು ಹೋಗಲು ಬಂದಿದ್ದ ’ಚೌಟ’ನ ಕೈಯಲ್ಲಿ ಊಟ ಕಳಿಸಿದರು. ’ಚೌಟು’ ಎಂದರೆ ಕಿವಿ ಕೇಳದೇ, ಮಾತು ಬಾರದೇ ಇರುವುದು. ಆ ಮನುಷ್ಯನಿಗೆ ಕಿವಿ ಸರಿಯಾಗಿ ಕೇಳುತ್ತಿರಲಿಲ್ಲ, ಮಾತು ಸರಿಯಾಗಿ ಬರುತ್ತಿರಲಿಲ್ಲ, ಹಾಗಾಗಿ, ’ಚೌಟೋನು’ ಎಂಬ ಹೆಸರೇ ಅವನಿಗೆ ಖಾಯಂ ಆಗಿ ಹೋಗಿತ್ತು. ಚೌಟೋನು ಅತ್ತ ಹೋಗುತ್ತಲೇ, ಅಜ್ಜಿಗೆ ಇವತ್ತು ಅಡಿಗೆ ಸ್ವಲ್ಪ ಹೆಚ್ಚಿಗೆ ಮಿಕ್ಕಿ ಹೋಗಿರುವುದು ಗಮನಕ್ಕೆ ಬಂತು. ’ಏ ಕರಿಯೇ ಅವನ್ನ, ಇಲ್ಲೇ ಊಟ ಮಾಡ್ಲೀ’ ಎಂದು ಅಡುಗೆ ಮನೆಯಿಂದ ಹೊರಕ್ಕೆ ಓಡಿಬಂದರು. ರುಕ್ಕೂಗೆ ಅವನನ್ನು ಮಾತಾನಾಡಿಸುವುದು ಹೇಗೆಂದು ಇವತ್ತಿಗೂ ತಿಳಿದಿರಲಿಲ್ಲ. ಏನೂ ಮಾಡಲಾಗದೆ ಸುಮ್ಮನೆ ನೋಡುತ್ತಾ ನಿಂತುಬಿಟ್ಟಳು. ಹೊರಗೆ ಬಂದ ಅಜ್ಜಿ, ಬೀದಿಯಲ್ಲಿ ಹೋಗುತ್ತಿದ್ದ ಒಬ್ಬ ಹುಡುಗನನ್ನು ಕರೆದು ’ಗೋಪಿ,ಗೋಪಿ ಅವನಿಗೆ ಹೇಳೋ ನಮ್ಮ ಮನೇಗೆ ಊಟಕ್ಕೆ ಬರೋಕ್ಕೆ’ ಎಂದು ಕೂಗಿದರು. ಗೋಪಿ ಓಡಿಹೋಗಿ ಚೌಟನನ್ನು ಹಿಡಿದು ಕೈಸನ್ನೆ ಬಾಯ್ಸನ್ನೆ ಮಾಡಿ ಹೇಳಿದ. ಚೌಟನು ತಿರುಗಿ ಹೂ ಎನ್ನುವಂತೆ ತಲೆಯಾಡಿಸಿ ಹೊರಟುಹೋದ. ಅಜ್ಜಿಗೆ ಈಗ ಒಂದು ರೀತಿ ಸಮಾಧಾನವಾದಂತಾಗಿ ಒಳಕ್ಕೆ ನಡೆದರು.

ರುಕ್ಕು ಹೊರಗೆ ಜಗಲಿಯ ಮೇಲೆ ಕೂತಿದ್ದಳು. ಮಧ್ಯಾಹ್ನ ನಿದ್ದೆ ಮಾಡಬಾರದು ಎಂದು ಅವಳ ಶಪಥ. ಇವಳು ನಿದ್ದೆ ಮಾಡಿದಾಗಲೆಲ್ಲಾ, ಅಜ್ಜಿ, ತಾತ, ಕಡೆಗೆ ಅವಳ ಅಣ್ಣನೂ ಕೂಡ ಏನಾದರೊಂದು ತರಲೆ ಮಾಡಿಬಿಟ್ಟಿರುತ್ತಾರೆ. ಇವಳು ಕಟ್ಟಿದ್ದ ಮನೆಯನ್ನು ಬೀಳಿಸಿಬಿಡುವುದು. ಹುಡುಕಿಟ್ಟಿದ್ದ ’ರೇರ್’ ಬೀಜಗಳನ್ನು ಕಸಕ್ಕೆ ಎಸೆದು ಬಿಡುವುದು, ಹೀಗೆ ಏನೇನೋ. "ರುಕ್ಕೂ, ಒಂದು ಹೊತ್ತು ಹಾಗೆ ಉರುಳ್ಕೋಬಾರ್ದಾ" ದಿಂಬು ನೆಲದ ಮೇಲೆ ಹಾಕುತ್ತಾ, ಅಜ್ಜಿ ಕೂಗಿದರು. "ನೀನು ಮಲಕ್ಕೋ ಅಜ್ಜಿ, ಇಲ್ಲಿ ಕಟ್ಟಿರೋ ದೇವಸ್ಥಾನಾನ ಏನು ಮಾಡ್ಬೇಡ" ಎಂದು ಅಜ್ಜಿಗೆ ಕಟ್ಟಪ್ಪಣೆ ಹೊರೆಸಿ ಬೀದಿಗಿಳಿದಳು. ಇದು ಅವಳ ಫೇವರೆಟ್ ಕೆಲಸ. ಬೇಸಿಗೆ ಕಾಲವಾದ್ದರಿಂದ ಎಲ್ಲೆಲ್ಲೂ ಹುಣಸೇ ಹಣ್ಣು, ಹುಣಸೇ ಬೀಜದ ಮಳೆ. ಬೀದಿಯಲ್ಲಿ ಸುಮ್ಮನೆ ನಡಕೊಂಡು ಹೋಗುತ್ತಿದ್ದರೇ ಸಾಕು, ಕೈಯಿಗೊಂದು, ಕಾಲಿಗೆರಡು ಹುಣಸೇ ಬೀಜ ಸಿಗುತ್ತದೆ. ಒಂದೊಂದಾಗಿ ಬೀಜಗಳನ್ನು ಆರಿಸಿಕೊಳ್ಳುತ್ತಾ ತನ್ನ ಉದ್ದನೆಯ ಜಾಕೀಟಿಗೆ ಹಾಕಿಕೊಳ್ಳುತ್ತಾ ಮುಂದಕ್ಕೆ ನಡೆಯುತ್ತಿದ್ದಳು. ಒಂದಿನ್ನೂರು-ಮುನ್ನೂರು ಬೀಜ ಆಗಿಬಿಟ್ಟರೇ ಸಾಕು ಎಂದು ಅವಳ ಲೆಕ್ಕಾಚಾರ. ತನ್ನ ಊರಿಗೆ ಹೋದ ನಂತರ ’ಏಳುಗುಣಿ ಮನೆ’, ’ಸರಿ ಬೆಸ’, ’ಚೌಕಾಬಾರ’ ಆಟಗಳನ್ನು ಆಡಲು ಅವಳ ಈ ಸಿದ್ಧತೆ. ಹಿಂದೆ ಒಂದು ಸಾರಿ ಇದೇ ರಿತಿ ಬೇಕಾದಷ್ಟು ಬೀಜಗಳನ್ನು ಕೂಡಿಟ್ಟಿದ್ದಳು. ಅತೀ ಉತ್ಸಾಹದಿಂದ ಹುಣಸೇಬೀಜಗಳನ್ನು ನೀರಿನಲ್ಲಿ ತೊಳೆದು ಕವರಿಗೆ ಹಾಕಿಟ್ಟಿದ್ದಳು. ಆದರೆ, ನೀರು ಬಿದ್ದದ್ದೇ ಹುಣಸೇ ಸಿಪ್ಪೆಯೆಲ್ಲಾ ಎದ್ದು ಬಂದು ಅವಳ ಶ್ರಮವೆಲ್ಲಾ ಹಾಳಾಗಿ ಹೋಯಿತು. ಮತ್ತೆ ಅವಳು ಆ ಸಾಹಸಕ್ಕೆ ಕೈ ಹಾಕಲಿಲ್ಲ.

ಮುಂದೆ ಮುಂದೆ ಸಾಗುತ್ತಾ ಮತ್ತೆ ಅವಳ ಸವಾರಿ ಗೌಡರ ಮನೆ ಕಡೆಗೆ ಬಂತು. ಈ ಸಾರಿ ಗೌಡರನ್ನು ನೋಡಲು ಅಲ್ಲ. ಅವರ ಮನೆಯಲ್ಲಿ ಹುಣಸೆಕಾಯಿ ಹೊಡೆಯುವ ಕೆಲಸಗಾರರನ್ನು ನೋಡಲು!

(ಮುಂದುವರೆಯುತ್ತದೆ)

6 ಕಾಮೆಂಟ್‌ಗಳು:

  1. ಸ್ವಲ್ಪ ತು೦ಬಾ ಬರೆಯಿರಿ ಮೇಡಮ್.... ಮು೦ದೆ ಏನಾಗಬಹುದೋ ಎ೦ದು ನಾವು ಕುತೂಹಲದಿ೦ದ ಕಾಯಲು ಅವಕಾಶವೇ ಕೊಡದ೦ತೆ ಕಥೆಯನ್ನು ಬೆಳೆಸುತ್ತಿದ್ದೀರಿ....

    ಶೈಲಿ ಆತ್ಮೀಯವಾಗಿದೆ ಹೇಮಾ ಅವರೇ.....

    ಪ್ರತ್ಯುತ್ತರಅಳಿಸಿ
  2. ನಿನ್ನ ಈ ಪ್ರಯತ್ನ ,ಬರಹ ಚೆನ್ನಾಗಿದೆ. ನೀರು ಕುಡಿದಷ್ಟು ಸಲೀಸಾಗಿ ಬರೆಯುತ್ತಿರುವೆ. ಚೆನ್ನಾಗಿದೆ. ನಾವು ಅಳುಗುಣಿ ಆಟ ಎಂದು ಕರೆಯುತ್ತಿದ್ದುದನ್ನು ನೀನು ಏಳುಗುಣಿ ಆಟ ಎಂದಿರುವುದು ನೋಡಿ ಖುಷಿಯಾಯಿತು,ಆ ಪ್ರಯೋಗ ನನಗೆ ಗೊತ್ತಿರಲಿಲ್ಲ.

    ಮುಂದಿನ ಕಂತುಗಳಿಗೆ ಕಾಯುತ್ತಿರುವೆ. ರುಕ್ಮಿಣಿ ಬಹಳ ಇಷ್ಟವಾದಳು.

    ಪ್ರತ್ಯುತ್ತರಅಳಿಸಿ
  3. @ ಸುಧೇಶ್,

    ನಾನು ನಿಮ್ಮ ಕಾಮೆಂಟನ್ನು ಹೇಗೆ ಅರ್ಥಮಾಡಿಕೊಳ್ಳಲಿ? ಸ್ವಲ್ಪ - ತುಂಬಾ ಬರೆಯಿರಿ ಎಂದಿದ್ದೀರಲ್ಲ? [ಆದ್ರೂ ನಂಗೆ ಗೊತ್ತಾಯ್ತು ನೀವು ಏನು ಹೇಳಲು ಹೊರಟಿರುವಿರಿ ಎಂದು, ಈ ನೆರೆ ಬಂದರೆ ಬಿಡುವು ಕೊಡುವುದು ಕಷ್ಟ ನೋಡಿ ಹಾಗಾಗಿಗೆ ನನ್ನ ಕಥೆ ಬರೆಯುವ ಕಥೆ :)]

    ಹಾಗೆ ಥ್ಯಾಂಕ್ಸ್, ’ಆತ್ಮೀಯವಾಗಿದೆ’ ಎಂದದ್ದಕ್ಕೆ.

    @ ಚಂದ್ರಕಾಂತ,

    ರುಕ್ಮಿಣಿ ಇಷ್ಟವಾಗಿದ್ದು ಕೇಳಿ ಖುಷಿಯಾಗುತ್ತಿದೆ.
    ’ಅಳುಗುಣಿ’ ಎನ್ನುವುದು ’ಏಳುಗುಣಿ’ಯಿಂದಲೇ ಬಂದಿರುವುದು ಎನ್ನಿಸುತ್ತದೆ ನನಗೆ. ನಾವು ಎರಡೂ ರೀತಿಯಲ್ಲಿ ಬಳಸುತ್ತೇವೆ. ಅಂದರೆ, ಅಮ್ಮನ ಕಡೆ ಬಳಗದಲ್ಲಿ ’ಅಳುಗುಣಿ’, ಅಪ್ಪನ ಕಡೆ ಬಳಗದಲ್ಲಿ ’ಏಳುಗುಣಿ’!

    @ ಗೀತಾ,

    ಏನು ತುಂಬಾ ಮಜಾ ಬರ್ತಾ ಇದೆಯಾ ನಿಂಗೆ?

    ಪ್ರತ್ಯುತ್ತರಅಳಿಸಿ
  4. ಮೇಡಮ್,

    ಮೂಗಿನ ಮೇಲೆ ತುಪ್ಪ ಸವರಿ ಆಸೆ ತೋರಿಸಿದಂತೆ ಇಷ್ಟಿಷ್ಟೇ ಬರೆಯುತ್ತೀರಲ್ಲ...ಓದುತ್ತಾ ಮತ್ತಷ್ಟು ಕುತೂಹಲ ಕೆರಳಿಸುವುದರ ಜೊತೆಗೆ ಚಿತ್ರಣ ಕಣ್ಣ ಸಾಗಿದಂತಿದೆ. ಮುಂದಿನದಕ್ಕೆ ಕಾಯುತ್ತಿದ್ದೇನೆ...

    ಪ್ರತ್ಯುತ್ತರಅಳಿಸಿ
  5. ಥ್ಯಾಂಕ್ಸ್ ಶಿವು,

    ಏನು ಮಾಡಲಿ ಕಥೆ ಬರೆಯುತ್ತಿದಂತಯೇ ಹಾಕುತ್ತಿದ್ದೇನೆ, ತುಂಬಾ ಉದ್ದ ಒಂದೇ ಸಾರಿ ಹಾಕಿಬಿಟ್ಟರೆ ಓದುವುದಿಲ್ಲವೇನೋ ಎಂಬ ಭಯ ಕೂಡ ಇದೆ.

    ಪ್ರತ್ಯುತ್ತರಅಳಿಸಿ