ಶುಕ್ರವಾರ, ಏಪ್ರಿಲ್ 3, 2009

ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ...

ಮಕ್ಕಳ ಕ್ಷೇಯೋಭಿವೃದ್ಧಿಯ ಬಗೆಗೆ ಹಿಂದೆಂದಿಗಿಂತಲೂ ಈಗ ಚರ್ಚೆ ಹೆಚ್ಚು. ನಾನು ಕೆಲವು ದಿನಗಳು ಈ ಚರ್ಚೆಗಳಲ್ಲಿ ಭಾಗವಹಿಸಬೇಕಾಗಿ ಬಂದದ್ದರಿಂದ ಮತ್ತು ಆ ವಿಷಯಗಳು ಇನ್ನೂ ನನ್ನ ಮನಸ್ಸಿನಲ್ಲಿ ಗುಂಗುಡುತ್ತಿದೆಯಾದ್ದರಿಂದ, ನನ್ನ ಈ ಪೋಸ್ಟಿನ ವಿಷಯವೂ ಮಕ್ಕಳೇ ಆಗಿದ್ದಾರೆ.

* * *

ಪಕ್ಕದ ಮನೆಯ ಪುಟ್ಟ ಎರಡು ವರ್ಷದ ಹೆಣ್ಣುಮಗುವಿಗೆ ದಿನಕ್ಕೆ ಎರಡು ಬಾರಿ ಸ್ನಾನ, ಮತ್ತೆ ಎರಡು ಸಾರಿಯೂ ನಾಲ್ಕೈದು ಕ್ರೀಮು. ಮಗು ಕಪ್ಪಗಿದೆಯಂತೆ, ದೊಡ್ಡವಳಾದ ಮೇಲೆ ಹುಡುಗರು ಮೆಚ್ಚುವುದಿಲ್ಲವೆಂದು ಈಗಿನಿಂದಲೇ ತಾಲೀಮು!

ಮಗಳು ನಾಲ್ಕನೇ ಕ್ಲಾಸು. ಅವಳಿಗೆ ಹಾಡು ಕಲಿಯಲು ಇಷ್ಟ, ಆದರೆ ತಾಯಿ ಕಳಿಸುವುದಿಲ್ಲ. ಅದರಿಂದ ಏನು ಲಾಭ ಎಂಬ ಅಸಡ್ಡೆ ಅವರಿಗೆ. ತಾವು ಕೆಲಸ ಮಾಡುವ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರಿಗೆ ಸರ್ಕಾರೀ ಕೆಲಸ ಸಿಕ್ಕಿದೆ. ಈಗ ಮಗಳನ್ನು ಅವರ ಬಳಿ ಟ್ಯೂಷನ್ನಿಗೆ ಕಳುಹಿಸುತ್ತಿದ್ದಾರೆ. ಎಕ್ಸಾಮ್ ಪಾಸು ಮಾಡುವ ಬಗ್ಗೆ ಟ್ರೇನಿಂಗ್ ತೆಗೆದುಕೊಳ್ಳಲು, ಮುಂದಕ್ಕೆ ಉಪಯೋಗವಾಗಲಿ ಎಂದು!

ದೀಪಾವಳಿ ಹಬ್ಬದ ದಿನ ತಾಯಿ ತನ್ನ ಒಂಭತ್ತು ತಿಂಗಳ ಮಗುವನ್ನು ಎತ್ತಿಕೊಂಡು ಹೊರಗೆ ಬೀದಿಯಲ್ಲಿ ನಿಂತಿದ್ದಾಳೆ. ಉಳಿದ ಮಕ್ಕಳು ಒಂದೇ ಸಮ ಆಟಂ ಬಾಂಬ್ ಹೊಡೆಯುತ್ತಿದ್ದಾರೆ. ಏಕೆ ಇಲ್ಲಿ ನಿಂತಿರುವುದೆಂದು ಅವರನ್ನೇ ಕೇಳಬೇಕು. ’ಮಗುವಿಗೆ ಧೈರ್ಯ ಬರಲಿ ಎಂದು!’

* * *

ಇಂತಹವು ಈಗ ಸರ್ವೇಸಾಮಾನ್ಯ ಎನಿಸುತ್ತಿದೆ. ನಮ್ಮ ಮಕ್ಕಳು ಹೀಗೇ, ಇಂತಹವರೇ ಆಗಬೇಕೆಂದು ಡಿಸೈನ್ ಮಾಡಿ ಬೆಳೆಸುವುದು ಹಿಂದೆಂದೂ ಇರಲಿಲ್ಲವೆನಿಸುತ್ತದೆ. ತನ್ನ ಮಗನನ್ನು ಬದಲಾಯಿಸಲು ಪ್ರಯತ್ನಿಸಿದ ಹಿರಣ್ಯ ಕಶಿಪು ಇದಕ್ಕೊಂದು ಅಪವಾದ ಎಂದು ಬೇಕಾದರೆ ಹೇಳಬಹುದೇನೋ? ಆದರೆ, ಅವನೂ ಸೋತಿದ್ದು ನಿಜ ತಾನೆ? ನಮ್ಮ ಮಕ್ಕಳು ಬೇರೆ ಮಕ್ಕಳಿಗಿಂತ ಹಿಂದೆ ಉಳಿದುಬಿಡುತ್ತಾರೆ ಎಂದು ಭಯ ಕೆಲವರಿಗೆ. ಆದರೆ, ಹಿಂದುಳಿಯುವುದು ಎಂದರೇನು? ಅದೇ ಸ್ಪಷ್ಟವಾಗಿ ನಮಗೆ ತಿಳಿದಿಲ್ಲ.

ನಮ್ಮ ಪೋಷಕರ ಮನೋಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾದರೆ ಒಂದು ಜಾಹಿರಾತನ್ನು ನೆನಪಿಸಿಕೊಳ್ಳಬೇಕು. ಮಗನಿಗೆ ಅಬ್ದುಲ್ ಕಲಾಮರ ಹಾಗೆ ಆಗಬೇಕೆಂಬ ಮಹದಾಸೆ. ಅದಕ್ಕೆ ತಾಯಿ ಏನು ಮಾಡಬೇಕು? ಅದೆಂತದೆಂತದೋ ಹಾಕಿ ಮಾಡಿರುವ ’ಬ್ರೇನ್ ಫುಡ್’ ತಿನ್ನಿಸಬೇಕು! ಕಲಾಮ್ ಸರ್ ನಿಜವಾಗಲೂ ’ಅಮೇಜ್ ಬ್ರೇನ್ ಫುಡ್’ ತಿಂದೇ ಹಾಗಾಗಿದ್ದ? ಇದರ ಬದಲು ನಮ್ಮ ಮಕ್ಕಳಿಗೆ ಅವರು ಸಾಗಿ ಬಂದ ದಾರಿಯನ್ನು ಹೇಳಿ ಉತ್ತೇಜಿಸುವುದು ಹೆಚ್ಚು ಉಪಯುಕ್ತವಲ್ಲವೇ?

ಮುಸ್ಲಿಮ್ ಸಂತ ಕವಿ ಖಲೀಲ್ ಗಿಬ್ರನ್(ಮೂಲ ಉರ್ದು)ಬರೆದಿರುವ ಎರಡು ಪದ್ಯಗಳು ಈ ಆಲೋಚನೆಗಳಿಗೆಲ್ಲ ಉತ್ತರವೇನೋ ಎನ್ನುವಂತಿದೆ, ನೀವೂ ಓದಿ ನೋಡಿ:

ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ
ಜೀವನದ ಸ್ವಪ್ರೇಮದ ಪುತ್ರಪುತ್ರಿಯರು ಅವರು
ಅವರು ನಿಮ್ಮ ಜತೆಗೆ ಇರುವುದಾದರೂ
ಅವರು ನಿಮಗೆ ಸೇರಿದವರಲ್ಲ.

ನಿಮ್ಮ ಪ್ರೀತಿಯನ್ನು ಅವರಿಗೆ ನೀಡಬಹುದು
ಆದರೆ ಆಲೋಚನೆಗಳನಲ್ಲ, ಅವರಂತಿರಲು
ನೀವು ಪ್ರಯತ್ನಿಸಬಹುದು: ಆದರೆ,
ಅವರನ್ನು ನಿಮ್ಮಂತೆ ನೋಡದಿರಿ,
ಜೀವನ ಹಿಮ್ಮುಖವಾಗಿ ಹರಿಯದಿರಲಿ.

(ಪದ್ಯಗಳನ್ನು ಒದಗಿಸಿದ ಚಂದ್ರಕಾಂತ ಮೇಡಮ್ ಗೆ ಧನ್ಯವಾದಗಳು)

7 ಕಾಮೆಂಟ್‌ಗಳು:

  1. ಹೇಮಾ

    ಪುಟ್ಟದಾದರೂ ಅರ್ಥಪೂರ್ಣ ಲೇಖನ. ಈ ಕಾಲಕ್ಕೆ ಹೆಚ್ಚು ಪ್ರಸ್ತುತವಾಗಿದೆ.
    ಮುಖ್ಯವಾಗಿ ಪ್ರತಿ ತಂದೆ ತಾಯಿಯೂ ಈ ವಿಷಯ ಅರಿತುಕೊಳ್ಳಬೇಕಿದೆ.
    ಹಿರಣ್ಯಕಶಿಪುವಿನ ಉದಾಹರಣೆ ಕಣ್ತೆರೆಸುವಂತಿದೆ.

    ಪದ್ಯ ಒದಗಿಸಿದ್ದಕ್ಕೆ ಧನ್ಯವಾದ ಹೇಳಿ ನನಗೆ ಸಂಕೋಚ ಉಂಟು ಮಾಡಿರುವೆ.

    ಪ್ರತ್ಯುತ್ತರಅಳಿಸಿ
  2. ತುಂಬ ಚೆನ್ನಾಗಿದೆ ಲೇಖನ.

    ಮಕ್ಕಳು ಮೊದಲೆ ಡಿಸೈನ್ ಆಗಿ ಬಂದುಬಿಟ್ಟಿರುತ್ತಾರೆ. ಪೋಷಕರು ಮಾಡುವುದೆಲ್ಲ ರಿ-ಡಿಸೈನು. ಅದರಿಂದ ಉಪಯೋಗಕ್ಕಿಂತ ಡ್ಯಾಮೇಜೇ ಜಾಸ್ತಿ !

    ಪದ್ಯಗಳೂ ಚೆನ್ನಾಗಿವೆ.

    (ಪಕ್ಕದ ಮನೆಯವರಿಗೆ ಇದನ್ನ ಓದಕ್ ಹೇಳ್ಲಾ ? ;))

    ಪ್ರತ್ಯುತ್ತರಅಳಿಸಿ
  3. ಹೇಮಾ ಮೇಡಮ್,

    ಮಕ್ಕಳ ಬಗೆಗಿನ ಲೇಖನ ಉಪಯುಕ್ತವೆನಿಸುತ್ತದೆ...ಈಗಿನ ಕಾಲದಲ್ಲಿ ತಂದೆತಾಯಿಗಳಿಗೆ ಇಷ್ಟವಾಗುವ ಹಾಗೆ ಮಕ್ಕಳಿರಬೇಕು...
    ಮಗುವಿಗೆ ದೈರ್ಯ ಬರಲು ಆಟಾಂ ಬಾಂಬು ಮುಂದೆ ನಿಲ್ಲಬೇಕೆ....
    ಹಿರಿಯರೆ ಮಕ್ಕಳ ಆಸೆ ಆಕಾಂಕ್ಷೆಗಳನ್ನು ನಶಿಸಿಹಾಕುತ್ತಿದ್ದಾರೆ... ಈ ವಿಚಾರವಾಗಿ ನಿಮ್ಮ ಲೇಖನ ಚಿಂತನಾರ್ಹವಾದುದು...
    ಅದಕ್ಕೆ ಚಂದ್ರಕಾಂತ ಮೇಡಮ್ ನೀಡಿರುವ ಕವಿ ಕಲೀಲ್ ಗಿಬ್ರನ್‌ನ ಅನುವಾದಿತ ಪದ್ಯ ತುಂಬಾ ಚೆನ್ನಾಗಿದೆ...
    ಧನ್ಯವಾದಗಳು...

    ಪ್ರತ್ಯುತ್ತರಅಳಿಸಿ
  4. @ ಚಂದ್ರಕಾಂತ,

    ನಿಮ್ಮ ಕಾಮೆಂಟಿಗೆ ಧನ್ಯವಾದಗಳು. ನೀವು ಸಂಕೋಚಪಡುವ ಅಗತ್ಯವಿಲ್ಲ.
    ಈ ಲೇಖನ ಹುಟ್ಟಿದ ರೀತಿಯೇ ಬೇರೆ ತಾನೆ?

    @ ಗೀತಾ, ನೀನು ಹೇಳಿರುವುದು ಸರಿಯಾಗಿದೆ. ಪಕ್ಕದ ಮನೆಯವರಿಗೆ ಈಗಲೇ ನನ್ನ ಮೇಲೆ ಕೋಪ, ನಾನು ಏನಾದರೂ ಹೇಳುತ್ತಿರುತ್ತೇನೆಂದು ... ;)

    @ ಶಿವು,

    ಧನ್ಯವಾದಗಳು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ. ಈಗ ನಿಮ್ಮ ಛಾಯಾ ಕನ್ನಡಿ ನೋಡಲು ಹೊರಟೆ :)

    ಪ್ರತ್ಯುತ್ತರಅಳಿಸಿ
  5. ಹೇಮಾ ಅವರೇ...

    ಈ ಹಿ೦ದೆ "ಸಾಗರ", ಈಗ "ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ".... ಮಕ್ಕಳ ಬಗ್ಗೆ ಅಥವಾ ಮನಶಾಸ್ತ್ರದ ವಿಷಯದಲ್ಲಿ ಏನಾದರೂ ಕೆಲಸ ಮಾಡುತ್ತಿದ್ದೀರಾ...

    ಈ ಲೇಖನದಲ್ಲಿ ನೀವು ಕೊಟ್ಟಿರುವ ಉದಾಹರಣೆಗಳು ಎಲ್ಲಾ ಕಡೆಗಳಲ್ಲೂ ನೋಡಬಹುದು.

    ನನ್ನ ಬಗೆಗಿನ ನಿರ್ಧಾರಗಳನ್ನು ನನಗೆ ತೆಗೆದುಕೊಳ್ಳಲು ಬಿಟ್ಟು ಸ್ವ೦ತಿಕೆ ಬೆಳೆಸಿದ ನನ್ನ ಅಮ್ಮನ ಬಗ್ಗೆ ಖುಶಿ ಎನಿಸುತ್ತದೆ.

    ಇ೦ತಹ ಲೇಖನಗಳು ಇನ್ನು ಇನ್ನು ಬರುತ್ತಿರಲಿ.

    ಪ್ರತ್ಯುತ್ತರಅಳಿಸಿ
  6. ಎಲ್ಲಿದ್ದೀರಿ ಮೇಡಮ್.... ತಿ೦ಗಳಿಗೆ ಒ೦ದೇ ಬರಹ ಪೋಸ್ಟ್ ಮಾಡಬೇಕೆ೦ದು ನಿರ್ಧರಿಸುವಿರೇನು? :)

    ಪ್ರತ್ಯುತ್ತರಅಳಿಸಿ
  7. :)

    @ ಮೊದಲ ಕಾಮೆಂಟ್ ,

    ನಾನು ಮಾಡುವ ಕೆಲಸ ’ಎದ್ಯುಕೇಶನ್’ ಗೆ ಸಂಬಂಧಿಸಿದ್ದು ಅಷ್ಟೆ.
    ನಿಮ್ಮ ತಾಯಿಯ ಬಗ್ಗೆ ಹೇಳಿರುವ ಮಾತು ತುಂಬಾ ಸರಿಯಾಗಿದೆ. ಆ ಜೆನೆರೇಷನ್ ಅಥವಾ ಅದರ ಹಿಂದಿನ ಜೆನೆರೇಷನ್ ಎಲ್ಲರೂ ಹಾಗೆ ಇದ್ದರೂ ಅನ್ನಿಸುತ್ತದೆ. ಆದರೆ, ಈಗಿನ ಪೋಷಕರನ್ನು ನೋಡಿದರೆ, ತುಂಬಾ ಬದಲಾವಣೆ ಕಾಣಿಸುತ್ತದೆ.

    @ ಎರಡನೇ ಕಾಮೆಂಟ್,

    ಹಾಗೆನಿಲ್ಲಾ ಸುಧೇಶ್, ಸ್ವಲ್ಪ ಓಡಾಟ ಜಾಸ್ತಿ ಆಗಿಬಿಟ್ತಿದೆ ಅಷ್ಟೆ. ಇಷ್ಟರಲ್ಲೇ, ನಿಮ್ಮ ’ಶಕುಂತಲೆ’ಯ ಹತ್ತಿರ ಬರುತ್ತೇನೆ...

    ಪ್ರತ್ಯುತ್ತರಅಳಿಸಿ