ಸೋಮವಾರ, ಮಾರ್ಚ್ 2, 2009

ನನ್ನ ಉತ್ತರ!

ಕಥೆಯು ಅಸ್ಪಷ್ಟ,
ಎಂಬುದೀಗ ಸ್ಪಷ್ಟ!

ಉತ್ತರವು ಬಹಳಾನೆ ಉದ್ದ ಬೆಳೆಯಿತು,
ವಾರೆಆಲೋಚನೆಯೊಂದು ಹೊಳೆಯಿತು

ಇದೇ ಒಂದು ಪೋಸ್ಟಾದರೆ ಹೇಗೆ?
ಹೇಳಿಬಿಡಬಹುದಲ್ಲ ನಾನಂದುಕೊಂಡದ್ದನ್ನೆಲ್ಲಾ ಹಾಗೆ,

ನೋಡಿ, ಇದೂ ಒಂದು ಪೋಸ್ಟು,
ಇದಕ್ಕೂ ದಯಪಾಲಿಸಿ ನಿಮ್ಮ ಕ್ರಿಟಿಕ್ಕು ಕಮೆಂಟು



@ ಚಂದ್ರಕಾಂತ
ಉತ್ತರ ಕೊಡಲು ತಡಮಾಡಿದ್ದಕ್ಕೆ ಕ್ಷಮೆಯಿರಲಿ. ಕೆಲಸ ಹೆಚ್ಚೆನಿಸುವಷ್ಟು ಜಾಸ್ತಿಯಾಗಿತ್ತು! ನಿನ್ನೆ ನಿಮ್ಮ ಬ್ಲಾಗಿನಲ್ಲಿ ಬರೆದು ಇಲ್ಲಿಗೆ ಬರುವಷ್ಟರಲ್ಲಿ ಸಿಸ್ಟಮ್ ಕೈಕೊಟ್ಟುಬಿಟ್ಟಿತು!

ಮತ್ತು ಸುಧೇಶ್,

ನಿಮ್ಮಿಬ್ಬರ ಕ್ರಿಟಿಕ್ಸ್ ನನಗೆ ಬಹಳಷ್ಟು ತಿಳುವಳಿಕೆ ನೀಡಿವೆ, ಕಥೆ ಬರೆಯುವ ವಿಷಯದಲ್ಲಿ.

ಇನ್ನು ತಡಮಾಡದೆ ನನ್ನ ಕಥೆಯ ಹಿಂದಿನ ಕಥೆಯನ್ನ ಹೇಳಿಬಿಡುತ್ತೇನೆ...

ಈ ಡಿಸ್ಲೆಕ್ಸಿಯ ವಿಷಯದ ಬಗೆಗೆ ತುಂಬಾ ಚರ್ಚೆ ನಡೆಯುತ್ತಿದ್ದಾಗ, ನಾನೂ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಯಿತು. ಅದರಿಂದ ತಿಳಿದ ಕೆಲವು ವಿಷಯಗಳು ಹೀಗಿವೆ:

೧. ಇಂಥದೊಂದು ಗುಣವು ಖಾಯಿಲೆಯೇ ಅಲ್ಲವೇ ಎಂಬುದು ಮೂಲ ಪ್ರಶ್ನೆ (ನನಗೆ!).
೨. ಈ ಗುಣವು ಹಿಂದಿನಿಂದಲೂ ಮನುಷ್ಯರಲ್ಲಿ ಕಾಣುವುದನ್ನು ನಾವು ಗಮನಿಸಬಹುದು.
೩. ಕೆಲ ’ಅತಿ ಬುದ್ಧಿವಂತರು’, ಅಂದರೆ ಐನ್ ಸ್ಟೈನ್ ಮುಂತಾದವರು ಹೀಗಿದ್ದರು ಎಂದರೆ, ಸಾಮಾನ್ಯರಿಗೆ ಅದು ಇರಲಿಲ್ಲವೆಂದಲ್ಲ.
೪. ಈಚೆಗೆ, ಇದರ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳುವ ಸಲುವಾಗಿ, ದೊಡ್ದ ಹುದ್ದೆಯಲ್ಲಿರುವವರೊಬ್ಬರು ಈ ಪರೀಕ್ಷೆ ತೆಗೆದುಕೊಂಡಾಗ ’ನಿಮಗೆ ಡಿಸ್ಲೆಕ್ಸಿಯಾ ಇದೆ, ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಉತ್ತರ ಬಂತು!
೫. ಭಾರತದಂಥ ದೇಶದಲ್ಲಿ ಒಂದು ತರಗತಿಯನ್ನು ನೀವು ತೆಗೆದುಕೊಂಡರೆ ಸುಮಾರು ಅರ್ಧದಷ್ಟು ಮಕ್ಕಳು, ಓದಲು ಬರೆಯಲು ಕಷ್ಟಪಡುವುದನ್ನು ನೀವು ನೋಡಬಹುದು(ಅರ್ಧಕ್ಕಿಂತ ಕೊಂಚ ಕಡಿಮೆ ಎನಿಸುತ್ತದೆ.)ಅದರರ್ಥ ಅವರು ಹೇಳುವುದನ್ನು ಗ್ರಹಿಸಿಲ್ಲ ಎಂದಲ್ಲ.
೬. ನಾನು ಭೇಟಿಮಾಡಿದ ಒಬ್ಬ ಮನೋವೈದ್ಯರ ಪ್ರಕಾರ, ಭಾರತದಂತಹ ದೇಶದಲ್ಲಿ ಈ ಗುಣ ಕೊಡುವ ತೊಂದರೆಗಿಂತ ಅದರ ಅಬ್ಬರವೇ ಹೆಚ್ಚು ತೊಂದರೆ ಮಾಡುತ್ತದೆ. ಇದಕ್ಕೆ ’ಏಡ್ಸ್’ ಅತ್ಯಂತ ಸೂಕ್ತ ಉದಾಹರಣೆ. (ನನಗೆ ಖಾಯಿಲೆ ಅನ್ನುವುದಕ್ಕಿಂತ ಗುಣ ಪದವೇ ಸೂಕ್ತವೆನಿಸುತ್ತದೆ)
೭. ಇದೆಲ್ಲಕ್ಕಿಂತ ಮುಖ್ಯವಾಗಿ, ಚೆನ್ನಾಗಿ ಓದುವ ಬರೆಯುವ ಮಕ್ಕಳು, ಗ್ರಹಣ ಶಕ್ತಿ ಚೆನ್ನಾಗಿರುವವರೇ ಆಗಿರಬೇಕೆಂದಿಲ್ಲ. ಪರೀಕ್ಷೆಯನ್ನು ಹೇಗೆ ಗೆಲ್ಲಬೇಕೆಂಬ ರೀತಿ ಅವರಿಗೆ ಗೊತ್ತಿದ್ದರೆ ಸಾಕು. ಉದಾಹರಣೆಗೆ, ಮುಖ್ಯ ಪ್ರಶ್ನೆಗಳನ್ನು ಓದಿಕೊಳ್ಳುವುದು, ಅರ್ಥವಾಗದಿದ್ದರೂ ರಟ್ ಮಾಡಿ ಬರೆಯುವುದು, ಹೀಗೆ.

ಚಂದ್ರಕಾಂತರವರು ಕೇಳಿರುವ ಪ್ರಶ್ನೆಗೆ ಉತ್ತರ ಇಲ್ಲಿದೆ - ನನ್ನ ಪ್ರಕಾರ ರಾಜರಾಮನಿಗೆ ಓದಲು ಅಮ್ಮನಿಂದ ಯಾವ ರೀತಿಯ ಒತ್ತಾಯವಿರಲಿಲ್ಲ. ಆದರೆ, ’ಅಪ್ಪ ಏನಾದರು ಹೇಳಿಕೊಂಡು ಹೋಗಲಿ’, ಎನ್ನುವ ಮೊಂಡು ಹಠ, ಅವನನ್ನು ರಕ್ಷಿಸಿತು. ಯಾರನ್ನೂ ಮೆಚ್ಚಿಸುವ ಹಂಗಿಲ್ಲದೇ ಇರುವುದೂ ಅವನಿಗೆ ಇದರಿಂದ ಬಂದಿತು. ಮೊಂಡನೇ ನನಗಿಲ್ಲಿ ನಾಯಕ, ಜವಾಬ್ದಾರಿಯ ಅರಿವಾದ ಮೇಲೆ ನಮಗೆ ಕಾಣುವ ರಾಜಾರಾಂ ಬೇರೆ.

ಇನ್ನು, ಸಾಗರ ಬದಲಾಗುವ ವಿಷಯ, ಅದು ಕಥೆ ಸಾಗುವಾಗ ಹಾಗೆ ತಲೆಗೆ ಬಂದದ್ದು. ಅದರ ಸರಿ ತಪ್ಪುಗಳನ್ನು ಈಗ ನಾನೇ ಪರೀಕ್ಷೆ ಮಾಡುತ್ತಿದ್ದೇನೆ!

ಒಟ್ಟಾರೆ ನನ್ನ ಗ್ರಹಿಕೆ ಇದ್ದದ್ದು ಇಷ್ಟೇ - ಮಕ್ಕಳು ಏನಾದರೂ ಮಾಡಿಕೊಳ್ಳಲಿ, ಅವರು ಜೀವನದಲ್ಲಿ ಗೆಲ್ಲಬೇಕಾದರೆ ಅವರಿಗೆ ಬೇಕಾದ್ದು ಆತ್ಮವಿಶ್ವಾಸ ಮತ್ತು ನಿರ್ವಂಚನೆಯ ಸಪೋರ್ಟ್ (ನನ್ನ ಮಗ ತಪ್ಪು ಮಾಡಿದನೋ ಇಲ್ಲವೋ ಆಮೇಲಿರಲಿ, ಮೊದಲು ಅವನು ಊಟ ಮಾಡಲಿ ಎನ್ನುವ ತಾಯಿಯ ರೀತಿ). ಅದನ್ನೇ ಇಲ್ಲಿ ನಾನು ಹೇಳಹೊರಟಿದ್ದು ಮತ್ತು ಅದಕ್ಕೇ ನಾನು ಸುಧಾ ಆಸ್ಪತ್ರೆಗೆ ಹೋಗದೇ ನಿಲ್ಲುತ್ತಾಳೆ ಎಂದು ಅಂತ್ಯ ಮಾಡಿದ್ದು!